ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಬಗ್ಗೆ ಸಾಕಷ್ಟು ಸಂಶಯ: ಸಿಎಂ ಬೊಮ್ಮಾಯಿ
ಬೆಂಗಳೂರು: ಲಾಲ್ ಬಹದ್ದೂರ್ ಶಾಸ್ತ್ರಿ ಯವರ 57ನೇ ಪುಣ್ಯ ತಿಥಿಯ ಅಂಗವಾಗಿ. ವಿಧಾನಸೌಧ ಆವರಣದಲ್ಲಿರುವ ಅವರ ಪ್ರತಿಮೆಗೆ ಸಿಎಂ ಬೊಮ್ಮಾಯಿ ಅವರು ಪುಷ್ಪನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶ ಕಂಡ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 57 ನೇ ಪುಣ್ಯತಿಥಿ ಆಚರಣೆ ಮಾಡಲಾಗುತ್ತಿದೆ. ಅವರ ಸಾವು ಒಂದು ದುರಂತ. ಅವರು ಪಾಕಿಸ್ತಾನದ ಮೇಲೆ ಗೆದ್ದ ಯುದ್ಧದ ಶಾಂತಿಯ ಸಲುವಾಗಿ ರಷ್ಯಾದ ತಾಷ್ಕೆಂಟ್ಗೆ ತೆರಳಿದಾಗ ಅವರ ಸಾವಿಗೀಡಾದರು. ಅವರ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿವೆ. ಆದರೆ ವಿದೇಶಕ್ಕೆ ದೇಶದ ಕೆಲಸಕ್ಕಾಗಿ, ಶಾಂತಿಗಾಗಿ ತೆರಳಿದ ಸಂದರ್ಭದಲ್ಲಿ ಮರಣ ಹೊಂದಿದ್ದು,
ಭಾರತಕ್ಕೆ ದೊಡ್ಡ ಆಘಾತವುಂಟು ಮಾಡಿತ್ತು ಎಂದರು. ಅತ್ಯಂತ ಬಡ ಕುಟುಂಬದಿಂದ ಬಂದು, ಸರಳವಾಗಿ ಬದುಕು ನಡೆಸಿದವರು. ಬಡತನದ ಬಗ್ಗೆ ಎಂದೂ ಕೀಳರಿಮೆ ಹೊಂದಿರಲಿಲ್ಲ. ಶ್ರೀಮಂತರಾಗಬೇಕೆಂಬ ಹಂಬಲವೂ ಇರಲಿಲ್ಲ. ನ್ಯಾಯನಿಷ್ಠುರರಾಗಿ, ಸತ್ಯದಿಂದ ಆಡಳಿತ ಮಾಡಿ , ನಮ್ಮೆಲ್ಲರಿಗೂ ಆದರ್ಶಪ್ರಾಯರು. ಅವರಿನ್ನೂ ಹೆಚ್ಚಿನ ಕಾಲ ಬದುಕಬೇಕಿತ್ತು. ಈ ದೇಶವನ್ನು ಆಳಿ, ಸತ್ಸಂಪ್ರದಾಯವನ್ನು ಹಾಕಿಕೊಡುತ್ತಿದ್ದರು ಎನ್ನುವ ವಿಶ್ವಾಸವಿತ್ತು. ಅವರ ಜೀವನ ಇಂದಿಗೂ ಆದರ್ಶ ಪ್ರೇರಣೆ ನೀಡುವಂಥದ್ದು. ಅವರನ್ನು ಸ್ಮರಿಸುವ ಮೂಲಕ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು. ಜೈ ಜವಾನ್, ಜೈ ಕಿಸಾನ್, ಅವರ ಅತ್ಯಂತ ಮಹತ್ವದ ಕೊಡುಗೆ. ಒಂದು ದೇಶದ ಸುರಕ್ಷತೆ, ಅಭಿವೃದ್ಧಿ, ಸ್ವಾವಲಂಬನೆ ಮತ್ತು ಸ್ವಾಭಿಮಾನ ಎಲ್ಲವೂ ಅವರು ನೀಡಿದ ಘೋಷವಾಕ್ಯದಲ್ಲಿದೆ. ಇಂದಿಗೂ ಈ ಘೋಷವಾಕ್ಯ ದೇಶದ ಅಭಿವೃದ್ಧಿಗೆ ಅಗತ್ಯ ಎಂದು ಹೇಳಿದ್ದಾರೆ.