ರಸ್ತೆಗೆ ಡಾಂಬರು ಹಾಕಿದ ಎರಡೇ ದಿನದಲ್ಲಿ ಕುಸಿದ ರಸ್ತೆ..!
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆಗೆ ಡಾಂಬರು ಹಾಕಿದ ಎರಡೇ ದಿನದಲ್ಲಿ ರಸ್ತೆ ಕುಸಿದಿರುವ ಘಟನೆ ಜರುಗಿದೆ. ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಲಾರಿಯೊಂದು ತೆರಳುತ್ತಿದ್ದಾಗ ಕಂದಕಕ್ಕೆ ಚಕ್ರ ಸಿಲುಕಿ ಪರದಾಡಬೇಕಾಯಿತು.
ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬಿಬಿಎಂಪಿಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಂಗಳವಾರ ಮುಂಜಾನೆ ಏಕಾಏಕಿ ರಸ್ತೆ ಕುಸಿದಿದ್ದು, 3.5 ಅಡಿ ಆಳದಷ್ಟು ಕಂದಕ ನಿರ್ಮಾಣವಾಗಿದೆ. ಗುಂಡಿ ಬಿದ್ದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರದಿಂದಲೇ ರಸ್ತೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಜಲಮಂಡಳಿಯ ಪೈಪ್ಲೈನ್ ಹಾದು ಹೋಗಿರುವ ಜಾಗದಲ್ಲೇ ರಸ್ತೆ ಕುಸಿದಿದ್ದು, ಪರಿಣಾಮ ಜಲಮಂಡಳಿಯ ಪೈಪ್ ತುಂಡಾಗಿದೆ.