ಲಕ್ಷಾಂತರ ದುಡ್ಡು ಕೊಟ್ಟಿದ್ದ ಹೋರಿ ಸಾವು: ರೈತನಿಗೆ ಅರಗಿಸಿಕೊಳ್ಳಲಾಗದ ದುಃಖ
ಗದಗ: ಕಳೆದ ತಿಂಗಳ ಹಿಂದೆಯೇ ಲಕ್ಷಾಂತರ ಹಣ ಕೊಟ್ಟು ಖರೀದಿ ಮಾಡಿ ಮುದ್ದಾಗಿ ಸಾಕಿದ್ದ ಕಿಲಾರಿ ತಳಿ ಹೋರಿ ಮೃತಪಟ್ಟಿದ್ದು ರೈತ ಕಂಗಾಲಾಗಿದ್ದಾರೆ. ಈ ಹೋರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮನೆ ಮಾತಾಗಿದ್ದವು. ಈ ತಿಂಗಳು ನಡೆಯುವ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯಲ್ಲಿ ಪ್ರದರ್ಶನಕ್ಕೆ ಈ ಹೋರಿಗಳು ಸಜ್ಜಾಗಿದ್ದವು.
ಆದ್ರೆ, ರೈತನ ಮುದ್ದಾದ ಹೋರಿ ಹೃದಯಾಘಾತದಿಂದ ಸಾವನ್ನಪ್ಪಿದೆ.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ರೈತ ದ್ಯಾಮಣ್ಣ ಸುಂಕದ ಎಂಬಾತ ಕಳೆದ ತಿಂಗಳು ಎರಡು ಹೋರಿಗಳನ್ನು 3.50ಲಕ್ಷ ಹಣ ಕೊಟ್ಟು ಖರೀದಿ ಮಾಡಿ ತಂದಿದ್ದರು. ಈ ಹೋರಿಗಳನ್ನು ಮಕ್ಕಳಂತೆ ಮುದ್ದಾಗಿ ಸಾಕಿದ್ದರು. ಹೀಗಾಗಿ ಈ ಹೋರಿಗಳು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸ್ತಾಯಿದ್ರು. ಆದ್ರೆ, ಇದ್ರಲ್ಲಿ ಒಂದು ಬಸವಣ್ಣ ಅನ್ನೋ ಹೋರಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಹೋರಿ ಅಕಾಲಿಕ ಸಾವು ರೈತ ದ್ಯಾಮಣ್ಣ ಸುಂಕದ ಕಂಗಾಲಾಗುವಂತೆ ಮಾಡಿದೆ.
ಜಾತ್ರೆಯಲ್ಲಿ 3.50 ಲಕ್ಷಕ್ಕೆ ಖರೀದಿ
ಜಾತ್ರೆಯೊಂದರಲ್ಲಿ ತಿಂಗಳ ಹಿಂದೆ 3.50 ಲಕ್ಷಕ್ಕೆ ರೈತ ದ್ಯಾಮಣ್ಣ ಸುಂಕದ ಖರೀದಿ ಮಾಡಿದ್ದರು. ಚೆನ್ನಾಗಿಯೇ ಜೋಡಿ ಹೋರಿಗಳು ಇದ್ದವು. ನಿತ್ಯವೂ ಗ್ರಾಮದಲ್ಲಿ ಸುತ್ತಾಡುವ ಹೋರಿಗಳನ್ನು ನೋಡಲು ಜನ್ರಿಗೆ ಅಷ್ಟೇ ಕುತೂಹಲವಿತ್ತು. ಈ ಹೋರಿ ಅಕಾಲಿಕ ಸಾವು ರೈತನಿಗೆ ಮಾತ್ರವಲ್ಲ ಇಡೀ ಗ್ರಾಮದ ಜನ್ರು ಕಣ್ಣೀರು ಹಾಕುವಂತಾಗಿದೆ.
ಸಿದ್ದಗಂಗಾ ಜಾತ್ರೆಯಲ್ಲಿ ಪ್ರದರ್ಶನಕ್ಕೆ ರೆಡಿಯಾಗಿದ್ದ ಹೋರಿ
ಇದೇ ತಿಂಗಳಲ್ಲಿ ನಡೆಯುವ ತುಮಕೂರ ಸಿದ್ದಗಂಗಾ ಮಠದ ಜಾತ್ರೆಯಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಹೋಗಲು ಎರಡು ಹೋರಿಗಳು ಸಿದ್ಧವಾಗಿದ್ದವು. ಆದ್ರೆ, ಬಸವಣ್ಣ ಅನ್ನೋ ಹೋರಿ ಜಾತ್ರೆಗೆ ಹೋಗುವ ಮುನ್ನವೇ ಹೃದಯಾಘಾತದಿಂದ ಸಾವನಪ್ಪಿದೆ. ಕೋಟುಮಚಗಿ ಗ್ರಾಮದ ರೈತರು, ಯುವಕರು ಬಸವಣ್ಣ ಸಾವಿಗೆ ಕಂಬನಿ ಮಿಡಿದಿದ್ದಾರೆ.