ಪ್ರಧಾನಿ ಮೋದಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಜೈರಾಮ್ ರಮೇಶ್
ನವದೆಹಲಿ: ಭಾರತದ ಆಹಾರ ಧಾನ್ಯ ಲಾಜಿಸ್ಟಿಕ್ಸ್ ಅನ್ನು ಅದಾನಿ ಗ್ರೂಪ್ಗೆ “ಹಸ್ತಾಂತರಿಸಲು” ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತರ ಭಾರಿ ಪ್ರತಿಭಟನೆ ನಡೆಸಿದ್ದರಿಂದ ಆಹಾರ ಧಾನ್ಯ ಲಾಜಿಸ್ಟಿಕ್ಸ್ ಅನ್ನು ಅದಾನಿಗೆ ಹಸ್ತಾಂತರಿಸುವ “ಪಿತೂರಿ” ತಾತ್ಕಾಲಿಕವಾಗಿ ವಿಫಲವಾಗಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಹಿಂಡೆನ್ಬರ್ಗ್ ರಿಸರ್ಚ್ ವರದಿಯ ನಂತರ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ.
“ಹಮ್ ಅದಾನಿ ಕೆ ಹೈ ಕೌನ್” ಸರಣಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತದ ಆಹಾರ ಧಾನ್ಯ ಲಾಜಿಸ್ಟಿಕ್ಸ್ ಅನ್ನು ಅದಾನಿ ಗ್ರೂಪ್ ಗೆ “ಹಸ್ತಾಂತರಿಸಲು” ಮೋದಿ ಸರ್ಕಾರ ಪಟ್ಟ ಕಠಿಣ ಶ್ರಮಕ್ಕೆ ಈ ವಿಷಯ ಸಂಬಂಧಿಸಿದೆ. ರೈತರ ಪ್ರತಿಭಟನೆಯಿಂದಾಗಿ ತಾತ್ಕಾಲಿಕವಾಗಿ ಈ ಪಿತೂರಿ ವಿಫಲವಾಯಿತು. 2020-21ರ ಆಂದೋಲನದಿಂದಾಗಿ ಕೃಷಿಗೆ ಸಂಬಂಧಿಸಿದ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು” ಎಂದು ತಿಳಿಸಿದ್ದಾರೆ.