ವಿಶ್ವಕರ್ಮ ಸಮಾಜ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ: ಡಾ. ಬಿ.ಎಂ ಉಮೇಶ್ ಕುಮಾರ್
ಬೆಂಗಳೂರು: ಕರ್ಮ ಸಿದ್ದಾಂತವನ್ನ ಪಾಲಿಸುತ್ತಾ ಬಂದಿರುವ ಶ್ರಮಿಕ ಜನಾಂಗವಾದ ವಿಶ್ವಕರ್ಮ ಸಮಾಜ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವಿಲ್ಲದೆ ಸೊರಗುತ್ತಿದ್ದು ಸಮಾಜಕ್ಕೆ ನ್ಯಾಯ ಕಲ್ಪಿಸುವ ಒಕ್ಕೊರಲಿನ ಪ್ರಾತಿನಿಧ್ಯಕ್ಕೆ ಮಾರ್ಚ್ 24 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಸಮಾಜದ ಜನಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಂಬಂಧ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರು ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಡಾ. ಬಿ.ಎಂ ಉಮೇಶ್ ಕುಮಾರ್ ಹೇಳಿದರು. ಇಂದು ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದ ಅಭಿವೃದ್ದಿಯಲ್ಲಿ ವಿಶ್ವಕರ್ಮ ಸಮುದಾಯದ ಗಮನಾರ್ಹ ಕೊಡುಗೆಯನ್ನು ನೀಡಿದೆ. ರಾಜ್ಯದ ಉದ್ದಗಲಕ್ಕೂ ನೆಲೆಸಿರುವ ಸಮಸ್ತ ವಿಶ್ವ ಕರ್ಮ ಜನಾಂಗ ಒಟ್ಟಾರೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಸಮುದಾಯಕ್ಕೆ ಸಿಗಬೇಕಾದಂತಹ ಹಲವಾರು ಸೌಲಭ್ಯಗಳು ದೊರೆತಿಲ್ಲ ಇದಕ್ಕೆ ರಾಜಕೀಯ ಹಾಗೂ ಸಾಮಾಜಿಕ ಇಚ್ಚಾಶಕ್ತಿಯ ಕೊರತೆ ಹೆಚ್ಚಾಗಿದೆ. ನಮ್ಮ ಸಮುದಾಯಕ್ಕೆ ಸಿಗಬೇಕಾದಂತಹ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಮಾಜವನ್ನ ಮತ್ತೊಮ್ಮೆ ಪುನರುತ್ಥಾನಗೊಳಿಸುವ ಅವಶ್ಯಕತೆ ಇದೆ. ಇದು ಕೇವಲ ಮಾತಿನಿಂದ ಸಾಧ್ಯವಿಲ್ಲ. ಮಾತು ಕೃತಿಯಾಗಲು ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ. ಎಲ್ಲರೂ ಒಂದೇ ಧ್ವನಿಯಿಂದ ನಮ್ಮ ಒತ್ತಾಯವನ್ನು ಮಂಡಿಸಬೇಕಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು