ಪತ್ನಿಗೆ ಹೆದರಿಸಲು ಹೋಗಿ ಕುತ್ತಿಗೆ ಲಾಕ್ ಆಗಿ ಸಂಪತ್ ನಿಧನ: ನಟ ರಾಜೇಶ್ ಧ್ರುವ ಸ್ಪಷ್ಟನೆ

0

ಕಿರುತೆರೆ ಹಾಗೂ ಸಿನಿಮಾ ರಂಗದ ನಟ ಸಂಪತ್ ಜಯರಾಮ್ ಏ.22ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಸಂಪತ್ ಜಯರಾಮ್ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ತಿಳಿಸಿದ್ದಾರೆ.

ಜೊತೆಗೆ ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್‌ಗಳನ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಸಂಪತ್ ಜಯರಾಮ್ ಕಿರುತೆರೆಯ ಖ್ಯಾತ ಧಾರವಾಹಿ ಅಗ್ನಿಸಾಕ್ಷಿಯಲ್ಲಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ ಪಾತ್ರದಲ್ಲಿ ಮಿಂಚಿದ್ದರು. ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಕೆಲ ಸಿನಿಮಾ ಹಾಗೂ ಸೀರಿಯಲ್ ಗಳಲ್ಲೂ ನಟಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಅಂತೆ ಕಂತೆ ಗಾಸಿಪ್‌ಗಳು ಶುರುವಾದವು. ಸಂಪತ್ ಸಾವಿನ ನೆಗೆಟಿವ್ ಸುದ್ದಿಗಳಿಗೆ ರಾಜೇಶ್ ಧ್ರುವ ಬ್ರೇಕ್ ಹಾಕಿದ್ದಾರೆ.

ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು ಎದ್ದೋ ಬಿದ್ನೋ ಅಂತ ಓಡಿ ಹೋದೆ ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ ಒಂದು ವರ್ಷ ಕೂಡ ಆಗಿರಲಿಲ್ಲ ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಅವರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವೆ. ಅವರ ಲವ್ ಸ್ಟೋರಿ ಪ್ರತಿಯೊಂದು ನನಗೆ ಗೊತ್ತು ಎಂದು ರಾಜೇಶ್ ಹೇಳಿದ್ದಾರೆ.

ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಆರ್ಥಿಕ ಸಮಸ್ಯೆ ಇತ್ತು ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ ಅಂತಾ ವಿಡಿಯೋ ಹರಿದಾಡುತ್ತಿದೆ. ಚಾನ್ಸ್ ಇರಲಿಲ್ಲ ನಿಜ ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು. ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತಾ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಎಂದು ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed