ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ: ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: ಸಲಿಂಗ ವಿವಾಹಗಳಿಗೆ (Same sex marriage) ಕಾನೂನು ಮಾನ್ಯತೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud) ಅವರು ಹಿಂದೆ ಸರಿಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ವಿಚಾರಣೆಯ 9ನೇ ದಿನವಾದ ಅನ್ಸನ್ ಥಾಮಸ್ ಎಂಬುವವರು ಮಾ. 13 ಮತ್ತು ಏ. 17 ರಂದು ಸುಪ್ರೀಂ ಕೋರ್ಟ್ಗೆ ಕಳುಹಿಸಿದ ಪತ್ರಗಳನ್ನು ಉಲ್ಲೇಖಿಸಲಾಯಿತು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಈ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂಬ ಅದರಲ್ಲಿನ ಮನವಿಯನ್ನು ಪೀಠ ತಿರಸ್ಕರಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಯವರನ್ನು ಹಿಂದೆ ಸರಿಯುವಂತೆ ಸಲ್ಲಿಸಿದ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿಜೆಐ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್, ಎಸ್.ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಿದೆ. ಅಸ್ಸಾಂ (Assam), ಆಂಧ್ರಪ್ರದೇಶ (Andhra Pradesh) ಮತ್ತು ರಾಜಸ್ಥಾನ (Rajasthan) ರಾಜ್ಯಗಳು ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸುವುದನ್ನು ವಿರೋಧಿಸಿವೆ.