ಮೇ 30ರಂದು ಸಂಜೆ 7 ಗಂಟೆಗೆ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಈ ಮುಹೂರ್ತ ದೇಶದ ಮೇಲೆ ಯುದ್ಧದ ಕಾರ್ಮೋಡ ತರಲಿದೆ ಎಂದು ಜ್ಯೋತಿಷಿಗಳು ವಿಶ್ಲೇಷಿಸಿದ್ದಾರೆ. ಆ ಸಮಯಕ್ಕೆ ವೃಶ್ಚಿಕ ಲಗ್ನ. ಲಗ್ನದಲ್ಲಿ ಗುರುವಿರುವುದು ಬಲ ಕೊಡುತ್ತೆ. ಆದರೆ ಲಗ್ನಕ್ಕೆ ಅಷ್ಟಮ ಸ್ಥಾನದಲ್ಲಿ ಕುಜ ಇರುವುದರಿಂದ ಇದು ಯುದ್ಧ ಸ್ಥಿತಿಯನ್ನು ಸೂಚಿಸುತ್ತದೆ. ಅದು ಸಾಮಾನ್ಯವಾದ ಯುದ್ಧವಲ್ಲ, ನಿರೀಕ್ಷೆಗೆ ಮೀರಿದ ಯುದ್ಧ. ಸ್ವತಃ ನರೇಂದ್ರ ಮೋದಿ ಅವರೇ ಬಲ ಪ್ರದರ್ಶನಕ್ಕೆ ಇಳಿಯಬೇಕಾಗುತ್ತದೆ. ದೇಶದ ಒಳಗಿನ ಹಾಗೂ ಹೊರಗಿನ ಶತ್ರುಪಡೆ ಮೇಲಿಂದ ಮೇಲೆ ಮುಗಿ ಬೀಳುತ್ತವೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ ದೇಶದಲ್ಲಿ ಪ್ರಮುಖ ವ್ಯಕ್ತಿಗಳ ಬಂಧನ ಸಾಧ್ಯತೆ ಹೆಚ್ಚಾಗಲಿದೆ. ಅರಾಜಕತೆ ಸೃಷ್ಟಿಸಲು ಯತ್ನಿಸುವ ಕೆಲವು ಹತಾಶ ನಾಯಕ- ನಾಯಕಿಯರ ಬಂಧನ ಆಗುವ ಸಾಧ್ಯತೆಗಳಿವೆ. ಇಂಥ ಬೆಳವಣಿಗೆಗಳಿಗೆ ಸ್ವತಃ ಪ್ರಧಾನಿ ಮೋದಿ ಅವರೇ ಆದೇಶ ನೀಡುವಂತೆ ಅಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಾರಿಯ ಅಧಿಕಾರಾವಧಿಯ ಕೊನೆ ಮೂರು ವರ್ಷ ಭಾರತದ ಹೆಸರು ವಿಶ್ವ ಮಟ್ಟದಲ್ಲಿ ರಾರಾಜಿಸಲಿದೆ ಎಂದು ಮಾಧ್ಯಮವೊಂದಕ್ಕೆ ಅಮ್ಮಣ್ಣಾಯ ವಿಶ್ಲೇಷಣೆ ನೀಡಿದ್ದಾರೆ.