ಗೆಲುವನ್ನೇ ಮೈಗೂಡಿಸಿಕೊಂಡಿರುವ ದಿನೇಶ್ ಗುಂಡೂರಾವ್ ವ್ಯಕ್ತಿಚಿತ್ರ

0

ಬೆಂಗಳೂರು: ದಿನೇಶ್ ಗುಂಡೂರಾವ್ (Dinesh Gundu Rao) ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಮೊದಲ ಸಾಲಿನ ನಾಯಕ. ಬೆಂಗಳೂರು (Bengaluru) ನಗರದ ಗಾಂಧಿನಗರ (Gandhinagar) ಕ್ಷೇತ್ರದ ಶಾಸಕರಾದ ಇವರಿಗೆ ಮಂತ್ರಿಗಿರಿ ಸಿಕ್ಕಿದೆ.

ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರ. ಇಂಜಿನಿಯರಿಂಗ್ ಪದವೀಧರರಾದ ದಿನೇಶ್ ಗುಂಡೂರಾವ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗಿನ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಜೀವನದ ವ್ಯಕ್ತಿಚಿತ್ರ ಇಲ್ಲಿದೆ.

ಕರ್ನಾಟಕ ಕಾಂಗ್ರೆಸ್‌ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಅವರ ಪುತ್ರ ದಿನೇಶ್‌ ಗುಂಡೂರಾವ್‌ ಚಿರಪರಿಚಿತ ಹೆಸರು. ಸತತ ಐದು ಬಾರಿ ಬೆಂಗಳೂರು ಗಾಂಧಿನಗರ ಕ್ಷೇತ್ರದಿಂದ ಗೆದ್ದಿರುವ ದಿನೇಶ್‌ ಗುಂಡೂರಾವ್‌ ಅವರು 1969ರ ಅಕ್ಟೋಬರ್ 9ರಂದು ಮಡಿಕೇರಿಯ ಕುಶಾಲನಗರದಲ್ಲಿ ಜನಿಸಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಅವರ ಮೂವರು ಪುತ್ರರಲ್ಲಿ ಎರಡನೇಯವರಾಗಿದ್ದಾರೆ. ಮಡಿಕೇರಿ ಮೂಲದ ಇವರು ಓದಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. 1992ರಲ್ಲಿ ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಎ ಎಂಜಿನಿಯರಿಂಗ್‌ ಪದವಿ ಪಡೆದರು.

ದಿನೇಶ್‌ ಗುಂಡೂರಾವ್‌ ಅವರು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮುಸ್ಲಿಂ ಸಮುದಾಯದ ತಬಸ್ಸುಮ್ ರಾವ್ ಅವರನ್ನು ವಿವಾಹದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿರುವ ಕರ್ನಾಟಕದ ಕಾಂಗ್ರೆಸ್ ನಾಯಕ ದಿನೇಶ್‌ ಗುಂಡೂರಾವ್‌. ಇವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದಾಗಲೇ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿತು.

ಇವರ ತಂದೆ ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದರಿಂದ, ರಾಜಕೀಯದಲ್ಲಿದ್ದರಿಂದ ಇವರು ಬೆಂಗಳೂರಿನಲ್ಲಿಯೇ ರಾಜಕೀಯ ಆರಂಭಿಸಿದರು. ಯುವ ಕಾಂಗ್ರೆಸ್ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1998ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದರು.

ನಂತರ 1999ರಲ್ಲಿ ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 2004 ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ವಿಜಯಪತಾಕೆ ಹಾರಿಸಿದರು. 2008ರ ವಿಧಾನಸಭೆ ಚುನಾವಣೆಯಲ್ಲಿ 41,188 ಮತಗಳ ಅಂತರದಿಂದ ಗೆಲುವಿನ ನಗಾರೆ ಬಾರಿಸಿದರು.

2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾದರು. 2018ರಲ್ಲಿ ಚುನಾವಣೆಯಲ್ಲಿ ಗೆದ್ದು 5ನೇ ಬಾರಿಗೆ ಶಾಸಕರಾದರು. ಜುಲೈ 11ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದರು. ಇದೀಗ 2023ರಲ್ಲಿ 6ನೇ ಬಾರಿಗೆ ಗೆಲ್ಲುವ ಮೂಲಕ ಮತ್ತೊಮ್ಮೆ ಸಚಿವರಾಗಿದ್ದಾರೆ.

About Author

Leave a Reply

Your email address will not be published. Required fields are marked *

You may have missed