ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ ಸೇತುವೆ
ಅಹಮದಾಬಾದ್ : ಗುಜರಾತ್ನ ತಾಪಿ ಜಿಲ್ಲೆಯಲ್ಲಿ ಮಾಯಾಪುರ ಮತ್ತು ದೇಗಾಮಾ ಗ್ರಾಮಗಳನ್ನು ಸಂಪರ್ಕಿಸಲು ಮಿಂದೋಲಾ ನದಿಗೆ ಅಡ್ಡಲಾಗಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ. ಇದಕ್ಕರ ಸಂಬಂಧಿಸಿದ ಮೂವರು ಎಂಜಿನಿಯರ್ಗಳ ಅಮಾನತುಗೊಳಿಸಲಾಗಿದೆ. ಕುಸಿದ ಸೇತುವೆಯಿಂದ 15 ಗ್ರಾಮಗಳಿಗೆ ತೊಂದರೆಯುಂಟಾಗಿದೆ.
2021ರಲ್ಲಿ ನಿರ್ಮಾಣ ಆರಂಭವಾಗಿದ್ದ ಸೇತುವೆಯ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಇದು ಉದ್ಘಾಟನೆಗೆ ಸಿದ್ಧವಾಗುತ್ತಿತ್ತು. ಮುಂಜಾನೆ ಸೇತುವೆ ದಿಢೀರ್ ಕುಸಿದಿದ್ದು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಸೇತುವೆ ನಿರ್ಮಾಣ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು ಕಳಪೆ ಗುಣಮಟ್ಟದ ವಸ್ತುಗಳನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ. ಹೀಗಾಗಿಯೇ ಸೇತುವೆ ಕುಸಿದು ಬಿದ್ದಿದೆ ಎಂದು ಗುತ್ತಿಗೆದಾರರ ವಿರುದ್ಧ ಸ್ಥಳೀಯರು ದೂರಿದ್ದಾರೆ. ಇತ್ತೀಚೆಗೆ ಬಿಹಾರದಲ್ಲೂ ಇಂತದ್ದೇ ಘಟನೆ ನಡೆದಿತ್ತು.ಈ ಸಂಬಂಧ ಮಾಹಿತಿ ನೀಡಿದ ತಾಪಿ ಜಿಲ್ಲಾಧಿಕಾರಿ ವಿಪಿನ್ ಗಾರ್ಗ್, ಸೇತುವೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸೇತುವೆಯ ಕೆಲವು ಭಾಗವು ಕುಸಿದಿದೆ. ನಾವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಮತ್ತು ಬಳಸಿದ ವಸ್ತುಗಳ ಗುಣಮಟ್ಟವನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.