ಬಿಜೆಪಿ ಜನರ ಮನಸ್ಸು ಕೆಡಿಸಿ ಸಮಾಜದ ಶಾಂತಿ ಕದಡಲು ಬಯಸುತ್ತದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು: ಬಿಜೆಪಿಯದ್ದು ಭಾವನಾತ್ಮಕ ಅಜೆಂಡಾ.. ನಮ್ಮದು ಜನಸಾಮಾನ್ಯರ ಬದುಕಿಗೆ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಭಾವನಾತ್ಮಕ ಅಜೆಂಡಾಗಳು ಬೇಕೇ ಹೊರತು, ಅಭಿವೃದ್ಧಿಯ ಅಜೆಂಡಾ ಬೇಕಾಗಿಲ್ಲ. ಆದರೆ ಕಾಂಗ್ರೆಸ್ ಜನಸಾಮಾನ್ಯರ ಬದುಕಿನ ವಿಚಾರಕ್ಕೆ ಆದ್ಯತೆ ನೀಡುತ್ತದೆ. ಉದ್ಯೋಗವಿಲ್ಲದೆ, ಹಸಿವಿನಿಂದ ಬಳಲುತ್ತಿರುವವರ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತದೆ ಎಂದು ಹೇಳಿದರು. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಅಜೆಂಡಾ ಹೇಳಿದ್ದಾರೆ.
ಬಿಜೆಪಿ ಅಜೆಂಡಾ ಜನರ ಮನಸ್ಸು ಕೆಡಿಸಿ ಸಮಾಜದ ಶಾಂತಿ ಕದಡಲು ಬಯಸುತ್ತದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಿ ದೇಶದ ಜನರ ಮನಸ್ಸು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಜನಸಾಮಾನ್ಯರಲ್ಲಿ ಪರಸ್ಪರ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ನಳಿನ್ ಕುಮಾರ್ ಹಾಗೂ ಬಿಜೆಪಿ ನಾಯಕರ ಹೇಳಿಕೆಯನ್ನು ಇಡೀ ದೇಶ ಖಂಡಿಸುತ್ತದೆ. ಪಕ್ಷದ ಅಧ್ಯಕ್ಷನಾಗಿ ನಾನು ಕೂಡ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.