ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದು ರಾಜಕೀಯ ಪ್ರಜಾಪ್ರಭುತ್ವದ ವಿಷಯವಾಗಿದ್ದು, ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿದೆ.
ಇದನ್ನು ಸಂಸತ್ತಿನಲ್ಲಿ ನಿರ್ಧರಿಸಬೇಕು ಎಂದು ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠ ತಿಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಒಂದಕ್ಕಿಂತ ಹಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕೆಂದು ಕೋರಿ ವಕೀಲೆ ಅಶ್ವಿನಿ ಉಪಧ್ಯಾಯ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ‘ಬೇರೆ ಬೇರೆ ಕಾರಣಗಳಿಗಾಗಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧೆ ಮಾಡುತ್ತಾನೆ. ಒಂದು ಕ್ಷೇತ್ರದಲ್ಲಿ ಜಯಿಸಲು ವಿಶ್ವಾಸವಿಲ್ಲದಿದ್ದರೆ ಇನ್ನೊಂದು ಕ್ಷೇತ್ರದಲ್ಲೂ ಸ್ಪರ್ಧಿಸಲು ಆತ ಇಚ್ಛಿಸುತ್ತಾನೆ. ಇದರಲ್ಲಿ ತಪ್ಪೇನಿದೆ? ಆದರೆ ಹೀಗೆ ಮಾಡುವುದನ್ನು ನಿರ್ಬಂಧಿಸುವುದು ಸಂಸತ್ತಿನಲ್ಲೇ ನಿರ್ಣಯ ಆಗಬೇಕು. ಸಂಸತ್ತು ನಿರ್ಣಯ ಕೈಗೊಂಡರೆ ಕೋರ್ಟ್ ಆಕ್ಷೇಪಿಸುವುದಿಲ್ಲ ಎಂದು ತಿಳಿಸಿತು ಹಾಗೂ ಅರ್ಜಿ ವಜಾ ಮಾಡಿತು. ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರ ಪರ ವಕೀಲರು, 2 ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ 2 ಕ್ಷೇತ್ರದಲ್ಲೂ ಗೆದ್ದರೆ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಾನೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿ ಆಗುತ್ತದೆ ಎಂದು ಹೇಳಿದರು.