ಒರಿಸ್ಸಾ ಬಾಲಾಸೋರ್ ರೈಲು ಅಪಘಾತ ಸಿಬಿಐ ತನಿಖೆಗೆ..!
ಭುವನೇಶ್ವರ: 278 ಜನರ ಸಾವಿಗೆ ಕಾರಣವಾದ ಒಡಿಶಾದ ಬಾಲಸೋರ್ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ಮಂಗಳವಾರ ಅಧಿಕೃತವಾಗಿ ಆರಂಭಿಸಿದೆ. ಅಪಘಾತದ ತನಿಖೆಯನ್ನು ಪ್ರಾರಂಭಿಸುವ ಮೊದಲು ತನಿಖಾ ಸಂಸ್ಥೆಯು ದಾಖಲೆಗಳು ಮತ್ತು ಹೇಳಿಕೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದೆ.
ಸೋಮವಾರ 10 ಜನರ ಸಿಬಿಐ ತಂಡ ಬಾಲಸೋರ್ (Balasore Train Tragedy) ನಲ್ಲಿ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿತ್ತು. ಪ್ರಾಥಮಿಕ ವರದಿಯೂ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಇದೇ ವೇಳೆ ಸ್ಥಳೀಯರಿಂದಲೂ ಹೇಳಿಕೆ ಪಡೆಯಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಒಡಿಶಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಹಿಂದೆ ದುಷ್ಕೃತ್ಯದ ಅನುಮಾನಗಳಿರುವ ಹಿನ್ನೆಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದರು.
ಜೂನ್ 2 ರಂದು ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ 278 ಜನರು ಸಾವನ್ನಪ್ಪಿದರು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸದ್ಯ ಘಟನಾ ಸ್ಥಳವನ್ನು ಸರಿಪಡಿಸಿದ್ದು ಮತ್ತೆ ಡೀಸೆಲ್ ಇಂಜಿನ್ ಸೇರಿದಂತೆ ಒಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ. ಬುಧವಾರದಿಂದ ಎಲೆಕ್ಟ್ರಿಕ್ ಇಂಜಿನ್ ರೈಲು ಸಂಚಾರ ಆರಂಭಿಸಲಿದೆ.