ಜನರು ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಬೆಲೆ ಕೊಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ಜನರು ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಬೆಲೆ ಕೊಡುವುದಿಲ್ಲ ಮತ್ತು ಈ ಬಾರಿ ಅದನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಹೇಳಿದ್ದಾರೆ.
ತರಕಾರಿಗಳು ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಕೂಡ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿತು.
‘ಮೋದಿ ಸರ್ಕಾರದ ಲೂಟಿಯಿಂದಾಗಿ ಹಣದುಬ್ಬರ ಮತ್ತು ನಿರುದ್ಯೋಗ ಎರಡೂ ನಿರಂತರವಾಗಿ ಹೆಚ್ಚುತ್ತಿವೆ. ಆದರೆ, ಬಿಜೆಪಿ ಅಧಿಕಾರದ ದುರಾಸೆಯಲ್ಲಿ ಮುಳುಗಿದೆ. ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದು, ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 8.45ಕ್ಕೆ ಏರಿಕೆಯಾಗಿದೆ’ ಎಂದು ಖರ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘ಹಳ್ಳಿಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 8.73 ರಷ್ಟಿದ್ದು, ಹಳ್ಳಿಗಳಲ್ಲಿ ಎಂಜಿಎನ್ಆರ್ಇಜಿಎಗೆ (ನರೇಗಾ) ಬೇಡಿಕೆ ಉತ್ತುಂಗದಲ್ಲಿದೆ. ಆದರೆ, ಮಾಡಸು ಯಾವುದೇ ಕೆಲಸವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ದರ ಕಡಿಮೆಯಾಗಿದೆ’ ಎಂದು ಹೇಳಿದರು.
‘ನರೇಂದ್ರ ಮೋದಿ ಜೀ, ನೀವು ಚುನಾವಣೆಗೆ ಮುನ್ನ ‘ಅಚ್ಛೇ ದಿನ್’, ‘ಅಮೃತ್ ಕಾಲ’ ಎಂಬ ಘೋಷಣೆಗಳ ಮೇಲೆ ಕೆಲಸ ಮಾಡುತ್ತಿದ್ದೀರಿ, ನಿಮ್ಮ ವೈಫಲ್ಯಗಳನ್ನು ಜಾಹೀರಾತುಗಳ ಸಹಾಯದಿಂದ ಮುಚ್ಚಿಹಾಕಬಹುದು ಎಂಬುದು ದೇಶದ ಜನರಿಗೆ ತಿಳಿದಿದೆ. ಆದರೆ, ಈ ಬಾರಿ ಅದು ಆಗುವುದಿಲ್ಲ. ಸಾರ್ವಜನಿಕರು ಜಾಗೃತರಾಗಿದ್ದಾರೆ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ ನಿಮ್ಮ ಪೊಳ್ಳು ಘೋಷಣೆಗಳಿಗೆ ಉತ್ತರಿಸುತ್ತಾರೆ’ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.