ದೇವಸ್ಥಾನದಲ್ಲಿ ಹಿಂದೂ ಜೋಡಿಯ ವಿವಾಹ ಮಾಡಿದ ಮುಸ್ಲಿಂ ಲೀಗ್
ಮಲಪ್ಪುರಂ: ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಲಪ್ಪುರಂ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಸಾರುವ ಕೇರಳದ ಕಥೆಯೊಂದು ನಡೆದಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಯುವ ಘಟಕವು ಮಲಪ್ಪುರಂ ದೇವಸ್ಥಾನದಲ್ಲಿ ಹಿಂದೂ ವಿವಾಹ ಸಮಾರಂಭವನ್ನು ನಡೆಸಿತು.
ವೆಂಗಾರ ಶ್ರೀ ಅಮ್ಮಂಚೇರಿ ಭಗವತಿ ದೇವಸ್ಥಾನದಲ್ಲಿ ವಿಷ್ಣು ಮತ್ತು ಗೀತಾ ಜೋಡಿಯ ವಿವಾಹ ಅದ್ಧೂರಿಯಾಗಿ ನೆರವೇರಿತು.
ಮುಸ್ಲಿಮ್ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲಿ ಶಿಹಾಬ್ ತಂಗಳ್, ಹಿರಿಯ ಮುಖಂಡ ಹಾಗೂ ಶಾಸಕ ಪಿ.ಕೆ.ಕುಂಞಾ ಲಿಕುಟ್ಟಿಯವರು ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಯನ್ನು ಆಶೀರ್ವದಿಸಿದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಮತ್ತು ಕಾಂಗ್ರೆಸ್ನ ಹಲವಾರು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪಾಲಕ್ಕಾಡ್ ಮೂಲದ ಗೀತಾ ವೆಂಗಾರದ ಮನಾಟ್ಟಿಪರಂಬುವಿನ ರೋಸ್ ಮ್ಯಾನರ್ ಶಾರ್ಟ್ ಸ್ಟೇ ಹೋಮ್ನಲ್ಲಿ ವಾಸಿಸುತ್ತಿದ್ದರು. ವೆಂಗಾರ ಮಣಟ್ಟಿಪರಂಬು ಮುಸ್ಲಿಂ ಲೀಗ್ ಕಾರ್ಯಕರ್ತರು ಗೀತಾ ಅವರ ವಿವಾಹವನ್ನು ಆಯೋಜಿಸಿದ್ದರು. ಸ್ಟೇ ಹೋಮ್ನ ಸೂಪರಿಂಟೆಂಡೆಂಟ್ ವಿಷ್ಣು ಜೊತೆ ಗೀತಾಳ ಮದುವೆಯನ್ನು ನಿಶ್ಚಯಿಸಿದರೆ, ಐಯುಎಂಎಲ್ನ ಯುವ ವಿಭಾಗವು ಆರ್ಥಿಕ ನೆರವು ನೀಡಿತು. ಅಮ್ಮಂಚೇರಿ ಭಗವತಿ ದೇವಸ್ಥಾನದ ಪ್ರಾಂಗಣದಲ್ಲಿ ಮಂಟಪ ಸ್ಥಾಪಿಸಲಾಗಿತ್ತು.
ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಪಿಕೆ ಕುನ್ಹಾಲಿಕುಟ್ಟಿ, ‘ಇಂದು, ದೇವಾಲಯದ ಪ್ರಾಂಗಣವು ನನ್ನ ನೆಲದ ಏಕತೆ ಮತ್ತು ಸ್ನೇಹವನ್ನು ಸಾರುವ ಸುಂದರವಾದ ಚಿತ್ರಗಳಿಗೆ ಸಾಕ್ಷಿಯಾಗಿದೆ. ಇದು ಅನುಕರಿಸಲು ಉತ್ತಮ ಸಂದೇಶವಾಗಿದೆ. ವಿಷ್ಣು ಮತ್ತು ಗೀತಾ ಅವರು ದಾಂಪತ್ಯ ಜೀವನಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದು ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.