ಉತ್ತರ ಭಾರತದಲ್ಲಿ ಮಳೆ ಅಬ್ಬರಕ್ಕೆ 37 ಜನರು ಬಲಿ
ನವದೆಹಲಿ: ಉತ್ತರ ಭಾರತದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ
ಹಿಮಾಚಲ ಪ್ರದೇಶವು ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ.
ಅಲ್ಲಿ ಕಳೆದ ಎರಡು ದಿನಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳು 18 ಜನರನ್ನು ಬಲಿ ಪಡೆದಿವೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಒಂಬತ್ತು ಜನರು, ರಾಜಸ್ಥಾನದಲ್ಲಿ ಏಳು ಮತ್ತು ಉತ್ತರ ಪ್ರದೇಶದಲ್ಲಿ ಮೂವರು ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ.
ಉಕ್ಕಿ ಹರಿಯುತ್ತಿದ್ದಾಳೆ ಯಮುನೆ, ಪ್ರವಾಹ ಭೀತಿ
ದೆಹಲಿಯ ಯಮುನಾ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಭಾರೀ ಮಳೆ ಮತ್ತು ಪ್ರವಾಹವನ್ನು ನಿಭಾಯಿಸಲು ಒಟ್ಟು 39 ಎನ್ಡಿಆರ್ಎಫ್ ತಂಡಗಳನ್ನು ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಪಂಜಾಬ್ನಲ್ಲಿ 14 ತಂಡಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಿಮಾಚಲ ಪ್ರದೇಶದಲ್ಲಿ 12, ಉತ್ತರಾಖಂಡದಲ್ಲಿ 08 ಮತ್ತು ಹರಿಯಾಣದಲ್ಲಿ 05 ತಂಡಗಳನ್ನು ನಿಯೋಜಿಸಲಾಗಿದೆ.