ನಿಷ್ಪಕ್ಷಪಾತ ಸರ್ಕಾರವಿದ್ದರೆ ಮಾತ್ರ ದೇಶ ಮತ್ತು ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ: ಕೆಸಿಆರ್
ಹೈದರಾಬಾದ್ : ಆಡಳಿತಾರೂಢ ಬಿಆರ್ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ, ಕೆಸಿಆರ್ ಎಂದೂ ಕರೆಯಲ್ಪಡುವ ಕೆ.ಚಂದ್ರಶೇಖರ್ ರಾವ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧಾರ್ಮಿಕ ಮತ್ತು ಜಾತಿ ಮತಾಂಧತೆ ಮತ್ತು ಸಮಾಜದಲ್ಲಿ ಒಡಕು ಮೂಡಿಸುವುದನ್ನು ಬಿಜೆಪಿಯು ದೇಶದಲ್ಲಿ ಮುಂದುವರಿಸಿದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಭಾರತದಲ್ಲೂ ಕೂಡ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಧಾರ್ಮಿಕ ಮತ್ತು ಜಾತಿಯ ಮತಾಂಧತೆಯನ್ನು ಉತ್ತೇಜಿಸಿದರೆ, ಜನರನ್ನು ವಿಭಜಿಸಿದರೆ, ಅಂತಹ ನೀತಿಗಳನ್ನು ಅನುಸರಿಸಿದರೆ ಅದು ನರಕದಂತಾಗುತ್ತದೆ.
ಅಫ್ಘಾನಿಸ್ತಾನ ದೇಶವನ್ನು ತಾಲಿಬಾನ್ ಆಕ್ರಮಿಸಿಕೊಂಡ ರೀತಿಯಾಗುತ್ತದೆ. ಅಂಥದ್ದೊಂದು ಭಯಾನಕ ಪರಿಸ್ಥಿತಿ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ದ್ವೇಷದಿಂದಾಗಿ ದೇಶದ ಜೀವನಾಡಿಯೇ ಸುಟ್ಟು ಭಸ್ಮವಾಗುವ ಸಂದರ್ಭಗಳು ಎದುರಾಗಲಿವೆ.ಆದ್ದರಿಂದ ವಿಶೇಷವಾಗಿ ಯುವಕರು ಜಾಗೃತರಾಗಿರಬೇಕು ಎಂದು ಕೆಸಿಆರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮಹಬೂಬಾಬಾದ್ ಮತ್ತು ಕೊತಗುಡೆಂನಲ್ಲಿ ಸಂಯೋಜಿತ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಗತಿಪರ ಮತ್ತು ನಿಷ್ಪಕ್ಷಪಾತ ಸರ್ಕಾರವಿದ್ದರೆ ಮಾತ್ರ ದೇಶ ಮತ್ತು ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು. ತೆಲಂಗಾಣದ ಉದಾಹರಣೆಯ್ನು ನೀಡಿದ ಅವರು, ಭವಿಷ್ಯದ ರಾಜಕೀಯದಲ್ಲಿ ಇಡೀ ದೇಶಕ್ಕೆ ಮುಂದಿನ ದಾರಿಯನ್ನು ನಮ್ಮ ರಾಜ್ಯ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸರಿಸಮಾನವಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ತೆಲಂಗಾಣದ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು (ಜಿಎಸ್ಡಿಪಿ) ಇರಬೇಕಾದಂತೆ ಬೆಳೆಯಲಿಲ್ಲ ಎಂದು ಅವರು ಆರೋಪಿಸಿದರು. 2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ತೆಲಂಗಾಣದ ಜಿಎಸ್ಡಿಪಿ 5 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು ಮತ್ತು ಇಂದು ಅದು 11.5 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ರಾವ್ ಹೇಳಿದರು.