ಬೆಂಗಳೂರಿನಲ್ಲಿ ಆಟಿ ಅಮವಾಸ್ಯೆ ಸಂಭ್ರಮ: ಕಷಾಯ, ಮೆಂತ್ಯ ಗಂಜಿ ಸೇವಿಸಿ ಆಚರಣೆ
ಬೆಂಗಳೂರು: ಕರಾವಳಿಯ ತುಳುವರು ಯಾವ ಊರಿಗೆ ಹೋದರೂ ತಮ್ಮ ಮೂಲ ಮರೆಯುವುದಿಲ್ಲ. ಬೆಂಗಳೂರಿನಲ್ಲಂತೂ ತುಳುವರು ಆಗಾಗ ತಮ್ಮ ಸಂಸ್ಕೃತಿ ಸಂಪ್ರದಾಯಗಳ ಉತ್ಸವವನ್ನು ನಡೆಸುತ್ತಲೇ ಇದ್ದಾರೆ. ಆಷಾಢ ಅಮಾವಾಸ್ಯೆಯನ್ನು ತುಳುವರು ಆಟಿ ಅಮಾವಾಸ್ಯೆ ಎಂದು ಆಚರಿಸುತ್ತಾರೆ. ಈ ಸಂಬಂಧ ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರು ತುಳುಕೂಟ ಆಯೋಜಿಸಿತ್ತು. ಮಲ್ಲೇಶ್ವರಂ ಮೆಟ್ರೋ ಸ್ಟೇಷನ್ ಬಳಿ ಇರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಆಟಿ ಅಮಾವಾಸ್ಯೆ ಆಚರಿಸಲಾಯಿತು. ಖಾಲಿ ಹೊಟ್ಟೆಗೆ ಹಾಲೆ ಮರದ ಕಷಾಯವನ್ನು ಕುಡಿಯಲಾಯಿತು. ಬಳಿಕ ಮೆಂತ್ಯ ಗಂಜಿಯನ್ನು ಹಂಚಲಾಯಿತು. ಈ ಅಮಾವಾಸ್ಯೆಯಂದು ಹಾಲೆ ಮರದಲ್ಲಿ ವಿಶೇಷವಾದ ಔಷಧೀಯ ರಸ ಸಂಗ್ರಹವಾಗಿರುತ್ತದೆ. ಇದನ್ನು ಕುಡಿದರೆ, ವರ್ಷಪೂರ್ತಿ ಯಾವುದೇ ರೋಗ ರುಜಿನಗಳು ಬಾಧಿಸುವುದಿಲ್ಲ ಎನ್ನುವುದು ತುಳುವರ ನಂಬಿಕೆಯಾಗಿದೆ. ಮಕ್ಕಳ ಹುಳಬಾಧೆ, ದೊಡ್ಡವರ ಡೈಯಾಬಿಟಿಸ್, ಬಿಪಿ, ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ತುಳುಕೂಟದ ಅಧ್ಯಕ್ಷ ಸುಂದರ ರಾಜ್ ರೈ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು ಎರಡೂವರೆ ಸಾವಿರ ಮಂದಿ, ಪಾಲ್ಗೊಂಡು ಕಷಾಯ ಸೇವಿಸಿದರು.