ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ವ್ಯವಸ್ಥೆ ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು: ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಅಂತಾ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ JDSನ ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದರು.
ಆಶಾ ಕಾರ್ಯಕರ್ತೆಯರ ಸಂಬಳ ಜಾಸ್ತಿ ಮಾಡಬೇಕು. ಅವರಿಗೂ ಪಿಂಚಣಿ ಕೊಡಬೇಕು. ಹೊಸ ಸ್ಮಾರ್ಟ್ಫೋನ್ಗಳನ್ನ ನೀಡಬೇಕು ಅಂತಾ ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರಾಜ್ಯ ಸರ್ಕಾರದಿಂದ ಈಗಾಗಲೇ 5 ಸಾವಿರ ಗೌರವ ಧನ ನೀಡಲಾಗ್ತಿದೆ. ಕೇಂದ್ರದಿಂದ 5-8 ಸಾವಿರ ಗೌರವ ಧನ ಸಿಗುತ್ತಿದೆ. ಒಟ್ಟಾರೆ 10-13 ಸಾವಿರ ಗೌರವ ಧನ ಸಿಗುತ್ತಿದೆ. ಸದ್ಯ ಅವರ ಗೌರವ ಧನ ಹೆಚ್ಚಳ ಸಾಧ್ಯವಿಲ್ಲ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ವ್ಯವಸ್ಥೆ ಸಾಧ್ಯವಿಲ್ಲ. ಅವರು ಸರ್ಕಾರಿ ಉದ್ಯೋಗಿಗಳು ಆಗಿದ್ದರೆ ಸಿಗುತ್ತಿತ್ತು. ಆದ್ರೆ ನಿಯಮದ ಪ್ರಕಾರ ಅವರಿಗೆ ಪಿಂಚಣಿ ಕೊಡಲು ಸಾಧ್ಯವಿಲ್ಲ. ಆಶಾ ಕಾರ್ಯಕರ್ತೆಯರು ಗ್ಯಾರಂಟಿ ಯೋಜನೆಗೆ ಅರ್ಜಿ ಹಾಕಬಹುದು. ಸರ್ಕಾರದ ಅದಕ್ಕೆ ಅವಕಾಶ ಕೊಟ್ಟಿದೆ. ಹೀಗಾಗಿ ಪರೋಕ್ಷವಾಗಿ ಅವರಿಗೆ ಅನುಕೂಲ ಆಗಿದೆ. ಸದ್ಯ ಗೌರವ ಧನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಸ್ಮಾರ್ಟ್ ಫೋನ್ ಕೊಡೋ ಬಗ್ಗೆ ಚಿಂತನೆ ಮಾಡ್ತೀವಿ ಅಂತಾ ತಿಳಿಸಿದರು.