ವಿಧಾನಸಭೆಯಲ್ಲಿ ಮಾಜಿ ಶಾಸಕ ಸಿ ಎಂ ನಿಂಬಣ್ಣವರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ಬೆಂಗಳೂರು ;- ಇಂದು ವಿಧಾನಸಭೆಯಲ್ಲಿ ಮಾಜಿ ಶಾಸಕರಾಗಿದ್ದ ಸಿ ಎಂ ನಿಂಬಣ್ಣವರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡು ನಿಂಬಣ್ಣವರ್ ಜು.9 ರಂದು ನಿಧನರಾಗಿರುವ ಬಗ್ಗೆ ಸದನಕ್ಕೆ ತಿಳಿಸಿದರು.
ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಸಮಾಜ ಸೇವಕರಾಗಿದ್ದರು. ಮಿಶ್ರಿಕೋಟೆ ಗ್ರಾಮದ ಸಹಕಾರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಸ್ವಯಂ ನಿವೃತ್ತಿ ಪಡೆದು ಅದೇ ಕಾಲೇಜಿನ ಛೇರ್ಮನ್ರಾಗಿದ್ದರು ಎಂದು ಸ್ಮರಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ, ಬೆಳಗಾವಿಯ ಕಾಡಾ ಮತ್ತು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಕಲಘಟಗಿ ಕ್ಷೇತ್ರದಿಂದ 2018ರಲ್ಲಿ 15ನೇ ವಿಧಾನಸಭೆಗೆ ಚುನಾಯಿತರಾಗಿದ್ದರು. ಶಾಸಕತ್ವದ 5 ವರ್ಷಗಳ ಅವಧಿಯಲ್ಲಿ ವಿಧಾನಸಭೇಯ ಅಧಿವೇಶನದಲ್ಲಿ ಒಂದು ದಿನವೂ ಗೈರಾಗದೇ ದಾಖಲೆ ನಿರ್ಮಿಸಿ ಮಾದರಿ ಆಗಿದ್ದರು ಎಂದು ಗುಣಗಾನ ಮಾಡಿದರು.