ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ
ತುಮಕೂರು: ಉಡುಪಿ ಮಠಕ್ಕೆ ಯಾವ ಮುಸ್ಲಿಂ ದೊರೆಗಳು ಜಾಗ ಕೊಟ್ಟಿಲ್ಲ, ಜಾಗ ನೀಡಿದ್ದು ರಾಮ ಭೋಜ ಎಂಬ ಅರಸ ಎಂದು ಪೇಜಾವರ ಶ್ರೀಗಳು (Pejavara shree) ಸ್ಪಷ್ಟಪಡಿಸಿದ್ದಾರೆ.
ಶ್ರೀ ಮಠಕ್ಕೆ ಮುಸ್ಲಿಂ ದೊರೆಗಳು ಜಾಗ ಕೊಟ್ಟಿದ್ದಾರೆ.
ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ (Congress) ಮುಖಂಡ ಮಿಥುನ್ ರೈ ಮಾತಿಗೆ ತುಮಕೂರಿನಲ್ಲಿ (Tumakuru) ಪ್ರತಿಕ್ರಿಯಿಸಿದ ಅವರು, ರೈ ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದರು.
ಮಧ್ವಾಚಾರ್ಯರು ಬದರಿ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಗಂಗಾ ನದಿಯ (Ganga River) ದಡದಲ್ಲಿ ತುರುಕರ ರಾಜ ಎದುರಾದಾಗ ಅರ್ಧ ರಾಜ್ಯ ದಾನ ಮಾಡಿದ್ದರು. ಆದರೆ ಉಡುಪಿಯ (Udupi) ಮಠಕ್ಕೆ ಮುಸ್ಲಿಂ ದೊರೆ ಜಾಗ ನೀಡಿದ್ದಲ್ಲ. ಈ ರೀತಿ ಆಧಾರ ರಹಿತ ಹೇಳಿಕೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ.
ಮಧ್ವಾಚಾರ್ಯರು (Madhvacharya) ಬದರಿಗೆ ಹೋಗುವಾಗ ಗಂಗಾ ನದಿ ದಾಟಿ ಹೋಗುವ ಪ್ರಸಂಗ ಎದುರಾಗಿತ್ತು. ಅಲ್ಲಿನ ತುರಕರ ದೊರೆ ನದಿಯನ್ನು ದಾಟಿ ಬರದಂತೆ ಸೇನೆ ನಿಯೋಜಿಸಿದ್ದ. ಆದರೆ ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ನದಿಯನ್ನು ಈಜಿಕೊಂಡು ದಾಟುವಾಗ ಸೇನೆ ಇವರನ್ನು ತಡೆಯಲು ಬಂತು. ಈಜುತ್ತಲೇ ನಾವು ಬರುವವರೆಗೆ ಅಲ್ಲೇ ಇರಿ, ನಾವು ನಿಶಸ್ತ್ರಧಾರಿಗಳು ಎಂದು ಸೈನಿಕರಿಗೆ ತಿಳಿಸಿದರು. ನಂತರ ದಡ ತಲುಪಿ ನಿರ್ಭೀತರಾಗಿ ಸೈನಿಕರ ಕಡೆ ನಡೆದರು. ಆಚಾರ್ಯರ ತೇಜಸ್ಸು ತುಂಬಿದ ಮಮತೆಯ ಕಣ್ಣುಗಳಿಗೆ ತುರ್ಕರ ದೊರೆ ಕೂಡ ಪ್ರಭಾವಕ್ಕೆ ಒಳಗಾದ. ಮತ್ತು ಅರ್ಧ ರಾಜ್ಯವನ್ನು ದಾನ ಮಾಡಿದ ಎಂದು ಮದ್ವಾಚಾರ್ಯರ ಉಲ್ಲೇಖವನ್ನು ನೆನಪಿಸಿಕೊಂಡಿದ್ದಾರೆ.