ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡಬೇಕು: ಮುಸ್ಲಿಂ ಧರ್ಮಗುರುಗಳಿಂದ ಸಿದ್ದರಾಮಯ್ಯಗೆ ಮನವಿ
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಂಗಳೂರಿನ ಶಿವಾನಂದ ವೃತ್ತದ ನಿವಾಸಕ್ಕೆ ಇಂದು ಮುಸ್ಲಿಂ ಸಮುದಾಯದ ನಾಯಕರು ತಮ್ಮ ಧರ್ಮಗುರುವಿನೊಂದಿಗೆ ಭೇಟಿ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಬೆಳಗ್ಗೆಯೇ ಆಗಮಿಸಿದ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರು ಕೆಪಿಸಿಸಿ ಕಚೇರಿಗೆ ತೆರಳುವ ಮುನ್ನವೇ ಸಿದ್ದರಾಮಯ್ಯರನ್ನು ಭೇಟಿಯಾದರು. ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ.
ಒಬ್ಬರಿಗಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿರುವ ಹಾಗೂ ಒತ್ತಡವಿರುವ ಕ್ಷೇತ್ರಗಳನ್ನು ಹೊರತುಪಡಿಸಿ 124 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಪ್ರಕಟಿಸಿದೆ. ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ನೂರಾರು ಮಂದಿ ಅಖಂಡ ಬೆಂಬಲಿಗರು ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಸಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಮಿಸ್ ಆಗಬಾರದು ಎಂದು ಆಗ್ರಹಿಸಿರುವ ಮುಸ್ಲಿಂ ಸಮುದಾಯದ ನಾಯಕರು, ಮೌಲ್ವಿಗಳಿಂದ ಒತ್ತಡ ಹೇರುವ ಯತ್ನ ನಡೆಸಿದ್ದಾರೆ. ಮೊದಲ ಪಟ್ಟಿಯಲ್ಲಿ ಶ್ರೀನಿವಾಸ ಮೂರ್ತಿ ಸೇರಿದಂತೆ ಹಾಲಿ 9 ಶಾಸಕರಿಗೆ ಟಿಕೆಟ್ ಲಭಿಸಿಲ್ಲ. ಎರಡನೇ ಪಟ್ಟಿಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿದೆ.