ಕಾರಿಗೆ ಬೆಂಕಿ ಇಟ್ಟ ಕೇಸ್: ಮುತ್ತಪ್ಪ ರೈ ಪುತ್ರ ವಿರುದ್ಧ ಚಾರ್ಜ್ಶೀಟ್
ಬೆಂಗಳೂರು: ಮುತ್ತಪ್ಪ ರೈ ಮಗನಿಂದ ಕೋಟಿ ರೂ. ಬೆಲೆಯ ಕಾರಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ಆತನ ತಂಡದ ಸದಸ್ಯರ ಮೇಲೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸದಾಶಿವನಗರದ ಸಪ್ತಗಿರಿ ಅಪಾ ರ್ಟ್ ಮೆಂಟ್ ನಲ್ಲಿ 2021ರ ಅಕ್ಟೋಬರ್ನಲ್ಲಿ ಈ ಘಟನೆ ನಡೆದಿತ್ತು.
ರಿಕ್ಕಿ ರೈ ಮತ್ತು ಶ್ರೀನಿವಾಸ್ ನಾಯ್ಡು ಒಂದು ಕಾಲದ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ನಿಧನದ ನಂತರ ರೈ ಗ್ರೂಪ್ನಿಂದ ಶ್ರೀನಿವಾಸ್ ನಾಯ್ಡು ಹೊರ ಬಂದಿದ್ದರು.
ನಾಯ್ಡು ಹೊರ ಬಂದಿದ್ದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸುತ್ತಿದ್ದ. ಶ್ರೀನಿವಾಸ್ ಬಳಸುತ್ತಿದ್ದ ಟಾಪ್ ಎಂಡ್, ಬ್ಲಾಕ್ ಕಲರ್ ರೇಂಜ್ ರೋವರ್ ಕಾರ್ ರಿಕ್ಕಿ ರೈಯ ಕಣ್ಣು ಕುಕ್ಕಿತ್ತು. ಘಟನೆಗೂ ಮೂರು ತಿಂಗಳು ಮೊದಲು ಶ್ರೀನಿವಾಸ್ ನಾಯ್ಡು ಕಾರ್ ನೋಡಿ ರಿಕ್ಕಿ ವಾರ್ನ್ ಮಾಡಿದ್ದ. ʼಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮರಿ.
ಎಷ್ಟು ದಿನ ಈ ಕಾರಲ್ಲಿ ಓಡಾಡ್ತಿಯಾ ನೋಡ್ತೀನಿ. ಈ ಕಾರನ್ನು ಬೂದಿ ಮಾಡ್ತೀನಿʼ ಎಂದು ವಾರ್ನಿಂಗ್ ನೀಡಿದ್ದ. ನಂತರ ನಾರಾಯಣ ಸ್ವಾಮಿ ಎಂಬಾತನ ಮೂಲಕ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ನಡೆಸಲಾಗಿತ್ತು. ಮೊದಲಿಗೆ ಶ್ರೀನಿವಾಸ್ ನಾಯ್ಡು ಸ್ನೇಹಿತ ಸುಪ್ರೀತ್ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಶ್ರೀನಿವಾಸ್ ನಾಯ್ಡು ಫ್ಲ್ಯಾಟ್ಗೆ ನುಗ್ಗಿ ಹಲ್ಲೆಗೆ ಯತ್ನಿಸಲಾಗಿತ್ತು. ಈ ಪ್ಲಾನ್ ಮಿಸ್ ಆದಾಗ ಕಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು.
ಮಧ್ಯರಾತ್ರಿ ಅಪಾರ್ಟ್ಮೆಂಟ್ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬುಲೆಟ್ ಮತ್ತು ಕಾರಿನಿಂದ ಪೆಟ್ರೋಲ್ ಎಳೆದಿದ್ದ ಆರೋಪಿಗಳು ಕಾರಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸದ್ಯ ಘಟನೆ ಸಂಬಂಧ ನಾರಾಯಣ ಸ್ವಾಮಿ, ಅಭಿನಂದನ್, ಮುನಿಯಪ್ಪ, ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಹಾಗೂ ರಿಕ್ಕಿ ರೈ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 188 ಪುಟಗಳ ಚಾರ್ಜ್ ಶೀಟನ್ನು ಸದಾಶಿವನಗರ ಪೊಲೀಸರು ಸಲ್ಲಿಕೆ ಮಾಡಿದ್ದಾರೆ.