KM ಶಿವಲಿಂಗೇಗೌಡ ವಿರುದ್ಧ 200 ಕೋಟಿ ಭ್ರಷ್ಟಾಚಾರ: ಲೋಕಾಯುಕ್ತಕ್ಕೆ ದೂರು ನೀಡಿದ ಎನ್. ಆರ್. ರಮೇಶ್
ಬೆಂಗಳೂರು: ₹200 ಕೋಟಿ ಭ್ರಷ್ಟಾಚಾರದ ಆರೋಪದಲ್ಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು, ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ 2 ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಎನ್ ಆರ್ ರಮೇಶ್ ಅವರು ಆರೋಪಿಸಿದ್ದಾರೆ.
200 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಆಗಿರೋ ಬಗ್ಗೆ ಎನ್.ಆರ್ ರಮೇಶ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಮಲೆನಾಡಿನ ಬಯಲು ಸೀಮೆ ಪ್ರದೇಶ, ಎತ್ತಿನಹೊಳೆಯಿಂದ ಕುಡಿಯುವ ನೀರಿನ ಯೋಜನೆಗೆ ಕಳೆದ 3 ವರ್ಷದಲ್ಲಿ ಕೋಟಿ ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ 5 ಕೋಟಿ ಕಾಮಗಾರಿಗೆ ಟೆಂಡರ್ ಕರೆಯದೇ ಏಕಾಏಕಿ ಕೆಲಸ ಮಾಡಲಾಗಿದೆ.
ಕೆಲವು ಕಡೆ ಕಾಂಕ್ರಿಟೀಕರಣ ಆಗಿದ್ದರೂ ಮತ್ತೆ ಆ ರಸ್ತೆ ದುರಸ್ಥಿ ಮಾಡಲಾಗಿದೆ ಎಂದು ಎನ್.ಆರ್ ರಮೇಶ್ ಆರೋಪಿಸಿದ್ದಾರೆ. ನರೇಗಾ ಕೆಲಸದಲ್ಲಿ 150 ಕೋಟಿ, ಎತ್ತಿನಹೊಳೆ ಯೋಜನೆಯಲ್ಲಿ 100 ಕೋಟಿ ನುಂಗಿರುವ ಆರೋಪವನ್ನು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಬಳಕೆ ಮಾಡಿ ಸುಳ್ಳು ದಾಖಲೆ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿರುವುದಾಗಿ ಎನ್.ಆರ್ ರಮೇಶ್ ಹೇಳಿದ್ದಾರೆ.