ಹೈಕಮಾಂಡ್ ಮಾತು ಕೇಳಿ ಚಿನ್ನದಂತಹ ಕ್ಷೇತ್ರ ಬಿಟ್ಟು ನಿರುದ್ಯೋಗಿಯಾದೆ: ವಿ. ಸೋಮಣ್ಣ
ಬೆಂಗಳೂರು: ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೇನೆ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ ಎಂದು ಬಿಜೆಪಿ (BJP) ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ.
ಚಾಲೆಂಜ್ ಆಗಿ ತಗೊಂಡೆ. ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳ್ತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ. ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ. ಮಾತಾಡೋದು ಅಗತ್ಯ ಇಲ್ಲ ಸೋತಿದ್ದೀನಿ ಅಷ್ಟೇ. ಜನರ ತೀರ್ಮಾನ ಇದು, ಬದ್ಧರಾಗಬೇಕು ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದಿವಲ್ಲ. ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ? ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ನ (Congress) ಗ್ಯಾರಂಟಿ ಯೋಜನೆಗಳೇ ಅವರ ಗೆಲುವಿಗೆ ಕಾರಣವಾಗಿದೆ. ಈ ದೇಶಕ್ಕೆ ಮೋದಿಯವರು ಪ್ರಶ್ನಾತೀತ ನಾಯಕರು. ಅವರ ಕೆಲಸಗಳು ಅವಿಸ್ಮರಣೀಯವಾಗಿದೆ. ನಾನು ಸೋಲನ್ನು ಒಪ್ಕೋಡಿದ್ದೇನೆ. ವರಿಷ್ಠರು ಕರೆ ಮಾಡಿದ್ದರು ಎಂದರು.