ಕರ್ತವ್ಯನಿರತ ASI ಹೃದಯಾಘಾತದಿಂದ ಸಾವು..!
ಬೆಂಗಳೂರು: ನಿವೃತ್ತಿಗೆ ಎರಡೇ ತಿಂಗಳು ಬಾಕಿ ಇರುವಾಗಲೇ ಕರ್ತವ್ಯನಿರತ ASI ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 60 ವರ್ಷದ ಜೆ.ಶ್ರೀನಿವಾಸ್ ಸಾವನ್ನಪ್ಪಿದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅವರು ನಿನ್ನೆ ರಾತ್ರಿ ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯ ಕೊಪ್ಪಗೇಟ್ ಬಿಟ್ಟು ಜಿಗಣಿ ಕಡೆ ಬೈಕ್ ನಲ್ಲಿ ತೆರಳುತ್ತಿದ್ದಾಗ ರಕ್ತದೊತ್ತಡ ಹೆಚ್ಚಾಗಿ ಕೆಳಗೆ ಬಿದ್ದಿದ್ದರು. ಪರಿಣಾಮ ಭುಜಕ್ಕೆ ಗಾಯವಾಗಿತ್ತು.
ಕೂಡಲೇ ಜಿಗಣಿ ಪೊಲೀಸರು ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಮುಂಜಾನೆ ಚಿಕಿತ್ಸೆ ಫಲಕಾರಿಯಾದೇ ಕೊನೆಯುಸಿರೆಳೆದರು. ಮೂಲತಃ ಬೆಂಗಳೂರಿನ ಹಲಸೂರಿನವರಾಗಿದ್ದ ಶ್ರೀನಿವಾಸ್ ಆನೇಕಲ್ ಉಪ ವಿಭಾಗದ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ನಿವೃತ್ತಿ ಹೊಂದಲು ಕೇವಲ ಎರಡು ತಿಂಗಳಷ್ಟೇ ಬಾಕಿ ಇತ್ತು. ಮೃತರ ಸಾವಿಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ್, ಪಿಐ ಸುದರ್ಶನ್ ಮತ್ತು ಪೊಲೀಸ್ ಇಲಾಖೆಯ ಅಪಾರ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.