ಯಡಿಯೂರಪ್ಪನವರಿಗೆ ಬಿಜೆಪಿ ನಾಯಕರು ಹೆದರಿಸಿ ಪ್ರಚಾರ ಮಾಡಿಸುತ್ತಿದ್ದಾರೆ: ಎಂ.ಬಿ. ಪಾಟೀಲ್ ಹೊಸ ಬಾಂಬ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ (BS Yediyurappa) ಬಿಜೆಪಿ ನಾಯಕರು ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಹೊಸ ಬಾಂಬ್ ಸಿಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ (BJP) ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸಲು ಲಿಂಗಾಯತರನ್ನೇ ಬಳಸುತ್ತಿದ್ದಾರೆ. ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲೂ ಬಲಿಯಾದರು, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ. ಬಿಜೆಪಿ ಸವದಿಗೆ ಟಿಕೆಟ್ ಭರವಸೆ ಕೊಟ್ಟಿತ್ತು. ಆದರೂ ಅವರಿಗೆ ಟಿಕೆಟ್ನ್ನೇ ಕೊಡಲಿಲ್ಲ, ಟಿಕೆಟ್ ತಪ್ಪಿಸಿದರು. ಲಿಂಗಾಯತ ಸಮುದಾಯವನ್ನು ಉಪಯೋಗಿಸಿ ಕೈಬಿಟ್ಟಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾ ವರ್ಕೌಟ್ ಆಗಿದೆ. ಹಾಗಾಗಿ ಈ ಬಾರಿ ಲಿಂಗಾಯತರು ಕಾಂಗ್ರೆಸ್ ಪರ ಬರುತ್ತಾರೆ. ಮರಳಿ ಮನೆಗೆ ಅಂತ ವಾಪಸ್ಸು ಬರುತ್ತಾರೆ. ಬಿಜೆಪಿ ಸರ್ಕಾರ ಬರಲ್ಲ ಅಂತ ಗೊತ್ತಾಗಿದೆ. ಆದ್ದರಿಂದ ಮೋದಿ, ಅಮಿತ್ ಶಾ ರಾಜ್ಯದಲ್ಲಿ ಮನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.