ರಾಜ್ಯ ಬಿಜೆಪಿ ಮೇಲಿನ ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ?: ರಾಜ್ಯ ಕಾಂಗ್ರೆಸ್
ಬೆಂಗಳೂರು: ರಾಜ್ಯ ಬಿಜೆಪಿ ಮೇಲಿನ ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ್ ಬೊಮ್ಮಾಯಿ ಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ!
ಸಂಸದ ಸಿದ್ದೇಶ್ ಹೇಳಿದ್ದಕ್ಕೂ, ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ ರಾಜ್ಯ ಬಿಜೆಪಿ? ಬೊಮ್ಮಾಯಿ ಅವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ? ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? ಎಂದು ಕೇಳಿದೆ.
ಮೋದಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸಿಕೊಳ್ಳುತ್ತಿರುವ ಸಂತೋಷ್, ಜೋಶಿ ಮುಖ ತೋರಿದರೂ ಮತ ಬರುವುದಿಲ್ಲ. ಬಿಜೆಪಿಯಲ್ಲಿನ ಯಾವ ಮುಖಕ್ಕೂ ಜನರಲ್ಲಿ ಭರವಸೆ ಹುಟ್ಟಿಸುವ ಯೋಗ್ಯತೆ ಇಲ್ಲ ಎಂಬುದು ವಿಜಯೇಂದ್ರರ ಮಾತಿನ ಸಾರಾಂಶ ಅಲ್ಲವೇ ರಾಜ್ಯ ಬಿಜೆಪಿ? ಎಂದು ಪ್ರಶ್ನಸಿದೆ.