ವಿಧಾನಸಭೆಯಲ್ಲಿ ನೂತನ ಸರ್ಕಾರದಿಂದ ನಡೆಯಬಹುದಾದ ವಿಶೇಷತೆಗಳು ಏನೆಲ್ಲಾ ಗೊತ್ತಾ..?
ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಮೊದಲ ಸಾರ್ವತಿಕ ಚುನಾವಣೆ ನಡೆದು ಇಲ್ಲಿಗೆ ಸರಿಯಾಗಿ 71 ವರ್ಷ ಆಗಿದೆ. ಈ ಬಾರಿಯದ್ದು 16ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ. ಮೇ 10ರಂದು ಮತದಾನ ನಡೆದು, ಮೇ 13ರಂದು ಫಲಿತಾಂಶ ಹೊರಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿದೆ. ಆಡಳಿತಾರೂಢ ಬಿಜೆಪಿ ಈ ಬಾರಿ ಕೇವಲ 66 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ ಜೆಡಿಎಸ್ 19 ಸ್ಥಾನಗಳಿಗೆ ಸೀಮಿತವಾಗಿದ್ದು,
4 ಜನ ಇತರರು ಆಯ್ಕೆಯಾಗಿದ್ದಾರೆ. ಈ ಬಾರಿಯ ಕರ್ನಾಟಕ ವಿಧಾನಸಭೆಯಲ್ಲಿ ದೇಶದ ಅತಿ ಹಿರಿಯ ಶಾಸಕರಿದ್ದಾರೆ. ಅದಲ್ಲದೇ 58 ಹೊಸ ಮುಖಗಳು ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸುತ್ತಿದ್ದು, 10 ಮಹಿಳಾ ಶಾಸಕಿಯರು ಕೂಡ ಆಯ್ಕೆಯಾಗಿದ್ದಾರೆ. ಈ ಬಾರಿ 8 ಮುಸ್ಲಿಂ ಶಾಸಕರು ಕೂಡ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ 16ನೇ ಕರ್ನಾಟಕ ವಿಧಾನಸಭೆ ಹಲವು ವಿಶೇಷತೆಗೆ ಕಾರಣವಾಗಿದ್ದು. ಒಂದಿಷ್ಟು ಪ್ರಮುಖ ಅಂಶಗಳು ಇಲ್ಲಿವೆ.
ಶಾಮನೂರು ಶಿವಶಂಕರಪ್ಪ ಅತಿ ಹಿರಿಯ ಶಾಸಕ!
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ಶಾಮನೂರು ಶಿವಶಂಕರಪ್ಪ ಈ ಬಾರಿಯ ಅತಿ ಹಿರಿಯ ಶಾಸಕರಾಗಿದ್ದಾರೆ. 92 ವರ್ಷದ ಶಾಮನೂರು ಶಿವಶಂಕರಪ್ಪನವರು ಕೇವಲ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಜೊತೆ ಮಾನ್ವಿ ಶಾಸಕ ಜಿ ಹಂಪಯ್ಯ ನಾಯ್ಕ್ (84), ಅಫಜಲಪುರ ಶಾಸಕ ಎಂವೈ ಪಾಟೀಲ್ (82), ಬಾಗಲಕೋಟೆ ಶಾಸಕ ಎಚ್ವೈ ಮೇಟಿ (77), ಹಳಿಯಾಳ ಶಾಸಕ ಆರ್ವಿ ದೇಶಪಾಂಡೆ (76) ಇತರ ಹಿರಿಯ ಶಾಸಕರಾಗಿ 16ನೇ ವಿಧಾನಸಭೆ ಪ್ರವೇಶಿಸಿದ್ದಾರೆ.