ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕೋವಿಡ್ ನಲ್ಲಿ ಚೀನಾವನ್ನು ಮೀರಿಸುತ್ತಿದ್ದರು: ಸಚಿವ ಆರ್ ಅಶೋಕ್
ಬೆಂಗಳೂರು: ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದುಬಿಡುತ್ತೇವೆ ಎಂಬ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳಜಗಳವಿದೆ.
ಜಿ ಪರಮೇಶ್ವರ್ ಸಹ ತಾವು ಸಿಎಂ ಅಂತಾರೆ, ಈಗ ಮಲ್ಲಿಕಾರ್ಜುನ ಖರ್ಗೆಯವರು ರೇಸ್ಗೆ ಬಂದಿದ್ದಾರೆ. ಸಿದ್ದರಾಮಯ್ಯ ನವರು ಸಹ ನಾನೇ ಸಿಎಂ ಆಗ್ತೇನೆ ಅಂತಾರೆ. ಡಿಕೆಶಿ ಯವರು ಜ್ಯೋತಿಷಿಗಳು ಹೇಳಿದ್ದಾರೆ, ತಾನು ಸಿಎಂ ಅಗ್ತೀನಿ ಅಂತಾರೆ.
ಕಾಂಗ್ರೆಸ್ ಒಳ ಜಗಳದಲ್ಲಿ ಮುಳುಗಿರುವ ಪಕ್ಷ, ಕಳೆದ ಐದು ವರ್ಷ ಅಧಿಕಾರದಲ್ಲಿದ್ದಾಗ ಜನರಿಗೊಸ್ಕರ ಏನನ್ನೂ ಮಾಡಲಿಲ್ಲ ಎಂದು ಅಶೋಕ್ ಆರೋಪಿಸಿದರು. ಕಾಂಗ್ರೆಸ್ ನವರಿಗೆ ಪಕ್ಷ ಮೊದಲು, ಆದರೆ ಬಿಜೆಪಿಯವರಿಗೆ ದೇಶ ಮೊದಲು, ಡಬಲ್ ಇಂಜಿನ್ ಸರ್ಕಾರ ಇರುವುದಕ್ಕೇ ನಾವು ನಮ್ಮದೇ ವ್ಯಾಕ್ಸಿನ್ ತಯಾರಿಸಿದ್ದೆವು. ಚೀನಾದಲ್ಲಿ ಕೊರೊನಾ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ, ಅದೇ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕೋವಿಡ್ನಲ್ಲಿ ಚೀನಾವನ್ನು ಮೀರಿಸುತ್ತಿದ್ದರು ಎಂದು ಸಚಿವರು ವ್ಯಂಗ್ಯವಾಡಿದರು.