ಜಲ್ಲಿಕಟ್ಟು: ಪೊಲೀಸರು ಸೇರಿದಂತೆ 22ಕ್ಕೂ ಹೆಚ್ಚು ಮಂದಿಗೆ ಗಾಯ
ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಸೀಸನ್ ಆರಂಭಗೊಂಡಿದೆ. ಪುದುಕ್ಕೂಟ್ಟೈನಲ್ಲಿ ಆರಂಭಗೊಂಡ ಈ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪೊಲೀಸರು ಸೇರಿದಂತೆ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆ ಪುದುಕ್ಕೂಟ್ಟೈನ ತಚ್ಚಂಕುರಿಚಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸ್ಪರ್ಧೆ ವೀಕ್ಷಿಸಲು ಬಂದವರು, ಸ್ಫರ್ಧಿಗಳು ಮತ್ತು ಪೊಲೀಸರು ಸೇರಿದಂತೆ ಈವರೆಗೆ 22ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು 300ಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಜನ ಕೂಡ ಕಿಕ್ಕಿರಿದು ತುಂಬಿಕೊಂಡು ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸಿದರು. ಹೋರಿಯನ್ನು ಪಳಗಿಸುವ ಸ್ಪರ್ಧೆಯ ವಿಜೇತರಿಗೆ ಬೈಕ್, ಕುಕ್ಕರ್ ಸಹಿತ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಈ ಬಾರಿ ವಿಶೇಷವಾಗಿ ಸೂಕ್ತ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಸ್ಪರ್ಧೆಯನ್ನು ಏರ್ಪಡಿಸಲು ಸರ್ಕಾರ ಮುಂದಾಗಿದೆ. ತಮಿಳುನಾಡಿನ ದೇಸಿ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿಹಿಂಸೆ ಕಾರಣದಿಂದ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು. ಆ ಬಳಿಕ ತಮಿಳುನಾಡು ಸರ್ಕಾರದ ಕಾನೂನು ಹೋರಾಟದ ಬಳಿಕ ಇದೀಗ ಮತ್ತೆ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನಲ್ಲಿ ನಡೆಯುತ್ತಿದೆ.