ಚಾಮರಾಜಪೇಟೆಯ ಈದ್ಗಾ ಮೈದಾನದ ಸುತ್ತ ಖಾಕಿ ಅಲರ್ಟ್
ಬೆಂಗಳೂರು ;- ನಗರ ಸೇರಿ ರಾಜ್ಯದಾದ್ಯಂತ ಮುಸ್ಲಿಂ ಬಾಂದವರಿಗೆ ಇಂದು ಬಕ್ರೀದ್ ಹಬ್ಬದ ಸಂಭ್ರಮ ಮನೆ ಮಾಡಿದೆ.
ಅದರಂತೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾನನ್ನು ಬೇಡಿಕೊಳ್ಳುತ್ತಾರೆ. ಹೀಗಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ರಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಹೀಗಾಗಿ ಯಾವುದೇ ಶಾಂತಿ ಕೆಡದಂತೆ ಪೊಲೀಸರು ಮೈದಾನದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಈದ್ಗಾ ಮೈದಾನ ಸುತ್ತಾ ಖಾಕಿ ಅಲರ್ಟ್ ಆಗಿದ್ದು, ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುನ್ನೆಚ್ಚರಿಕೆ ವಹಿಸಿದ್ದು, ಬಕ್ರೀದ್ ಹಬ್ಬದ ಅಂಗವಾಗಿ ವಾಹನ ಕೂಡ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಈದ್ಗಾ ಮೈದಾನದಲ್ಲಿ ಸಾರ್ವತ್ರಿಕ ಪ್ರಾರ್ಥನೆ ಹಿನ್ನೆಲೆ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ನಗರದ ಬಸವೇಶ್ವರ ವೃತ್ತದಿಂದ ಸಿ.ಐ.ಡಿ ಜಂಕ್ಷನ್ವರೆಗಿನ ರಸ್ತೆ ನಿರ್ಬಂಧ ವಿಧಿಸಿ, ದೇವರಾಜ ಅರಸು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಲಾಲ್ಬಾಗ್ ಮುಖ್ಯದ್ವಾರದಿಂದ ಕಣ್ಣಪ್ಪ ಪೆಟ್ರೋಲ್ ಬಂಕ್ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ, ಹೊಸೂರು ರಸ್ತೆಯಲ್ಲಿ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಇನ್ನೂ ಟೋಲ್ಗೇಟ್ ಜಂಕ್ಷನ್ನಿಂದ ಸಿರ್ಸಿ ವೃತ್ತದವರೆಗೆ ರಸ್ತೆ ನಿರ್ಬಂಧ ವಿಧಿಸಿದ್ದು, ಸಿರ್ಸಿ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್ಬಂಡ್ ರಸ್ತೆ ಬಳಸಬಹುದು.
ರಸ್ತೆಮಾರ್ಗವಾಗಿ ಮಾಗಡಿ ರಸ್ತೆ ವಿಜಯನಗರದ ಮೂಲಕ ಮೈಸೂರು ರಸ್ತೆಗೆ ಸಂಪರ್ಕಿಸಬಹುದು. ಮೈಸೂರು ರಸ್ತೆ ಸಿಟಿ ಮಾರುಕಟ್ಟೆ ಕಡೆಗೆ ಸಂಚರಿಸುವವರು ಕಿಂಕೋ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆಯಬೇಕು. ವಿಜಯನಗರ ಮಾಗಡಿ ಮುಖ್ಯರಸ್ತೆಯ ಮಾರ್ಗವಾಗಿ ಸಿರ್ಸಿ ವೃತ್ತಕ್ಕೆ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.