ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿದ್ದ ವೇಶ್ಯಾವಾಟಿಕೆ ಕಿಂಗ್ ಪಿನ್ ಸ್ಯಾಟ್ರೋ ರವಿ
ಬೆಂಗಳೂರು: ವರ್ಗಾವಣೆ ದಂಧೆಯ ಕಿಂಗ್ ಪಿನ್, ವೇಶ್ಯಾವಾಟಿಕೆ ದಂಧೆಯ ಮಾಸ್ಟರ್ ಸ್ಯಾಂಟ್ರೋ ರವಿ ಕೊನೆಗೂ ಗುಜರಾತ್ನಲ್ಲಿ ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ರವಿ ಬರೋಬ್ಬರಿ 15 ಸಿಮ್ ಕಾರ್ಡ್ಗಳನ್ನು ಬದಲಿಸಿದ್ದ ಎಂದು ಮೂಲಗಳು ತಿಳಿಸಿವೆ.
ವರ್ಗಾವಣೆ ದಂಧೆ, ವೇಶ್ಯಾವಾಟಿಕೆಗಳಂತಹ ಹಲವು ಆರೋಪಗಳ ಮೇಲೆ ಸ್ಯಾಂಟ್ರೋ ರವಿ ವಿರುದ್ಧ ಜನವರಿ 4 ರಂದು ಪ್ರಕರಣ ದಾಖಲಾಗಿತ್ತು. ಸಣ್ಣ ಸುಳಿವನ್ನೂ ನೀಡದೇ ರಾಜ್ಯ ಬಿಟ್ಟಿದ್ದ ಸ್ಯಾಂಟ್ರೋ ಹುಡುಕಾಟ ಪೊಲೀಸರಿಗೂ ಸವಾಲಾಗಿತ್ತು. ಸುಮಾರು 7 ರಾಜ್ಯಗಳಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಕೊನೆಗೂ 10 ದಿನಗಳ ನಂತರ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
4 ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಟೀಂಗಳಾಗಿ ಪೊಲೀಸರು ಸ್ಯಾಂಟ್ರೋಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಪದೇ ಪದೇ ಸಿಮ್ ಕಾರ್ಡ್ಗಳನ್ನು ಬದಲಿಸುತ್ತಿದ್ದ. ಒಮ್ಮೆ ಬಳಸಿದ ಸಿಮ್ ಅನ್ನು ಆತ ಮತ್ತೊಮ್ಮೆ ಬಳಸುತ್ತಿರಲಿಲ್ಲ. ಅಷ್ಟೇ ಅಲ್ಲದೇ ಆನ್ಲೈನ್ ಖಾತೆಯ ಮೂಲಕ ಎಲ್ಲಿಯೂ ವ್ಯವಹಾರ ನಡೆಸಿರಲಿಲ್ಲ. ಇದರಿಂದ ಪೊಲೀಸರಿಗೆ ಆತನನ್ನು ಪತ್ತೆಹಚ್ಚುವುದು ಸವಾಲಾಗಿತ್ತು. ಗುರುವಾರ ರಾತ್ರಿ ಗುಜರಾತ್ನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ರವಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ಶುಕ್ರವಾರ ಮಧ್ಯಾಹ್ನ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಐಪಿಎಸ್ ತಂಡಗಳ ನೇತೃತ್ವದಲ್ಲಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
ರವಿ ಈ ಹಿಂದೆ ತನ್ನ ಗ್ರಾಹಕರಾಗಿದ್ದವರ ಬಳಿ ಆಶ್ರಯ ಪಡೆದಿದ್ದ. ಆತನಿಗೆ ಪೊಲೀಸ್ ಇಲಾಖೆಯ ಆಳ ಅಗಲದ ಅರಿವಿತ್ತು. ಹೀಗಾಗಿ ಪೊಲೀಸರು ಚಾಪೆ ಕೆಳಗೆ ತೂರಿದರೆ ಆತ ರಂಗೋಲಿ ಕೆಳಗೆ ತೂರುತ್ತಿದ್ದ. ರಾಜ್ಯ ಬಿಟ್ಟವನು ಸೀದಾ ಬಾಂಬೆ ಸೇರಿದ್ದ. ಆ ಬಳಿಕ ಬಾಂಬೆ ದಾಟಿ ಗುಜರಾತ್ಗೆ ಎಂಟ್ರಿ ಕೊಟ್ಟಿದ್ದ. ರವಿ ಬಂಧನಕ್ಕಾಗಿ ಪೊಲೀಸರು ರಾಜ್ಯದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲೂ ಹುಡುಕಾಟ ನಡೆಸುತ್ತಿದ್ದರು. ಆತ ಗುಜರಾತ್ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಮಧ್ಯಾಹ್ನ ಆತನನ್ನು ಅರೆಸ್ಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ನಲ್ಲಿ ರವಿಯನ್ನು ಬಂಧಿಸಿರುವ ಮೈಸೂರು ಪೊಲೀಸರು ಶನಿವಾರ ಮುಂಜಾನೆ ಕಾರ್ನಾಟಕಕ್ಕೆ ಕರೆತರುವ ಸಾಧ್ಯತೆಯಿದೆ.