ಬಿಜೆಪಿ ಸೋಲಿನ ರಹಸ್ಯ ಬಯಲು ಮಾಡಿದ ರೇಣುಕಾಚಾರ್ಯ..!
ಬೆಂಗಳೂರು: ನಮ್ಮ ಸೋಲಿಗೆ ಯಾರೂ ಕಾರಣರಲ್ಲ, ನಾವೇ ಕಾರಣ ಎನ್ನುವ ವಾಜಪೇಯಿ ಅವರ ಮಾತು ಈ ಸಂದರ್ಭದಲ್ಲಿ ಪ್ರಸ್ತುತವಾಗುತ್ತದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅಭಿಪ್ರಾಯಪಟ್ಟರು. ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಮತ್ತು ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಚುನಾವಣೆಯಲ್ಲಿಒಬ್ಬ ವ್ಯಕ್ತಿ ಗೆದ್ದಾಗ ಯಾವುದೇ ಪ್ರಶ್ನೆ ಬರಲ್ಲ. ಸೋತಾಗ ನೂರೆಂಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆಗೆ ನಾನು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ನಾನು ತಂದ ಸಾವಿರಾರು ಕೋಟಿ ಅನುದಾನ, ಕೈಗೊಂಡ ಕಾಮಗಾರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಾವು ಎಡವಿದ್ದೇವೆ. ಸೋತಾಗ ಆರೋಪಗಳು ಸಹಜ, ಆದ್ದರಿಂದ ಆತ್ಮ ವಿಮರ್ಶೆ ಮಾಡಿಕೊಂಡು ಮುಂದಿನ ಹೆಜ್ಜೆ ಬಗ್ಗೆ ಚರ್ಚೆ ಮಾಡಬೇಕಾಗಿದೆ ಎಂದರು.
ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಿದ ರೇಣುಕಾಚಾರ್ಯ!
ನಮ್ಮ ಸರಕಾರ ಪ್ರಕಟಿಸಿದ ಒಳ ಮೀಸಲಾತಿ ವಿಷಯಕ್ಕೆ ಕಾಂಗ್ರೆಸ್ ಪಕ್ಷ ತುಪ್ಪ ಸುರಿಯಿತು. ಇದರಿಂದಾಗಿ ನನ್ನ ಕ್ಷೇತ್ರವೂ ಸೇರಿ ಸುಮಾರು 45 ಕ್ಷೇತ್ರಗಳಲ್ಲಿ ನಮಗೆ ಸೋಲುಂಟಾಗಿದೆ. ಕಾಂಗ್ರೆಸ್ ಪಕ್ಷ ಸರಕಾರಿ ನೌಕರರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಹೇಳಿಕೆ ನೀಡಿದ್ದು, ಬೆಲೆ ಏರಿಕೆ, ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕಡಿತ ಮಾಡಿದ್ದು, ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಷಯಗಳು ಹಾಗೂ ಬಹುಮುಖ್ಯವಾಗಿ ಗ್ಯಾರಂಟಿ ಕಾರ್ಡ್ನ ಭರವಸೆಗಳು ನಮ್ಮ ಸೋಲಿಗೆ ಕಾರಣವಾಗಿವೆ ಎಂದರು.
ಸೋಲಿನಿಂದ ನಾನು ಧೃತಿಗೆಟ್ಟಿಲ್ಲ, ಕಣ್ಣೀರಿಟ್ಟಿಲ್ಲ, ನಮ್ಮ ತಮ್ಮನ ಮಗ ಸತ್ತಾಗ ಮಾತ್ರ ನಾನು ಮನಸಾರೆ ಅತ್ತಿದ್ದು ಉಂಟು. ಇನ್ನು ಮುಂದೆ ನಮ್ಮ ಕಾರ್ಯಕರ್ತರ ಜೊತೆಗೂಡಿ ಮುಂದಿನ ಹೆಜ್ಜೆ ಇಡುವ ಕುರಿತು ಗಮನ ಹರಿಸುತ್ತೇನೆ. ಬೆಲೆ ಏರಿಕೆ, ಗ್ಯಾಸ್, ತೈಲ ದರ ಏರಿಕೆ ಹಾಗೂ ಸಿದ್ದರಾಮಯ್ಯ ಅವರು ವಾಟ್ಸಪ್ ಮೂಲಕ ಹೊನ್ನಾಳಿ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮೆಸೆಜ್ ಮಾಡಿದ್ದು ನನ್ನ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.