ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ನೇರ ಹೊಣೆ: ವಕೀಲ ಸೂರ್ಯ ಮುಕುಂದರಾಜ್
ಬೆಂಗಳೂರು: ರೂಪಾ ನಡೆ ಪ್ರಶ್ನಿಸುವವರು ಡಿಕೆ ರವಿ ಸಾವಿಗೆ ಸಂಬಂಧಿಸಿದ ಸಿಬಿಐ ವರದಿ ಓದಲಿ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ವಕೀಲ ಸೂರ್ಯ ಮುಕುಂದರಾಜ್ ಹೇಳಿದ್ದಾರೆ. ಡಿ ರೂಪಾ ಬೆಂಬಲಿಸಿರುವ ಅವರು ಐಎಎಸ್ ಅಧಿಕಾರಿ ಡಿಕೆ ರವಿ ಸಾವಿಗೆ ಸಂಬಂಧಿಸಿದ ಸಿಬಿಐ ತನಿಖಾ ವರದಿಯ ಪ್ರತಿಯನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜತೆಗೆ, ರೂಪಾ ಅವರ ನಡೆಯನ್ನು ಪ್ರಶ್ನಿಸುವವರು ಸಿಬಿಐ ತನಿಖಾ ವರದಿಯನ್ನು ಓದಬೇಕು. ಡಿಕೆ ರವಿ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸಿಬಿಐ ವರದಿಯಲ್ಲಿ ಉಲ್ಲೇಖವಿದೆ. ಅದನ್ನು ಓದಬೇಕು ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಅದೃಷ್ಟ ಚೆನ್ನಾಗಿದ್ದುದರಿಂದ ಅಂದು ಅವರ ಮೇಲೆ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಲಿಲ್ಲ. ರವಿ ಸಾವಿನ ನೋವನ್ನು ಪತ್ನಿ ಕುಸುಮಾ ಹಾಗೂ ಅಂದಿನ ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು ಎಂದು ಸೂರ್ಯ ಮುಕುಂದರಾಜ್ ಉಲ್ಲೇಖಿಸಿದ್ದಾರೆ. ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ಕಾರಣ. ರೋಹಿಣಿ ಹಾಗೂ ಡಿಕೆ ರವಿಯವರ ಎಲ್ಲ ಸಂಭಾಷಣೆ ಸಿಬಿಐ ವರದಿಯಲ್ಲಿದೆ ಎಂದು ಸೂರ್ಯ ಮುಕುಂದರಾಜ್ ಉಲ್ಲೇಖಿಸಿದ್ದಾರೆ. ಜತೆಗೆ, ಒಬ್ಬ ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ ತನ್ನ ಚೆಲ್ಲಾಟವನ್ನು ಮುಂದುವರೆಸಿದ್ದಾರೆ. ಈಗ ರೂಪ ಅದಕ್ಕೆ ಅಂತ್ಯವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.