ಬಜೆಟ್ ಮಂಡನೆ ಹಿನ್ನೆಲೆ: ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫೆಬ್ರವರಿ 17ರಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಫೆ.17ರಂದು ಬೆಳಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ಮೇಲೆ ಕೈಗೊಳ್ಳಬೇಕಾದ ಚರ್ಚೆ ಹಾಗೂ ಸರ್ಕಾರದ ವಿರುದ್ಧ ಕೈಗೊಳ್ಳುವ ಹೋರಾಟದ ಬಗ್ಗೆ ಒಂದು ಸಂಜೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.
ಶಾಸಕರು ಸಂಸದರು ರಾಜ್ಯಸಭೆ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಬಜೆಟ್ ಸಂದರ್ಭ ಕೈಗೊಳ್ಳಬಹುದಾದ ಚರ್ಚೆಗಳ ಕುರಿತು ಸಿದ್ದರಾಮಯ್ಯ ಎಂದು ಸದಸ್ಯರಿಂದ ಸಲಹೆ ಸೂಚನೆ ಸ್ವೀಕರಿಸಲಿದ್ದಾರೆ.
ರಾಜ್ಯದಲ್ಲಿ 15 ನೇ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆದಿರುವ ಸಿದ್ದರಾಮಯ್ಯ ಇದರ ಜೊತೆ ಹಲವು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ,ಯುಟಿ ಖಾದರ್ ಕೆ ಗೋವಿಂದರಾಜ್, ಎಂ ಬಿ ಪಾಟೀಲ್ , ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ , ಸಲೀಂ ಅಹಮ್ಮದ್, ಧ್ರುವನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಲ್ಲಿದ್ದಾರೆ. ಶಾಸಕಾಂಗ ಪಕ್ಷದ ಎಲ್ಲ ಸದಸ್ಯರುಗಳು ಹಾಗೂ ಬಾಹ್ಯ ಬೆಂಬಲಿತ ಸದಸ್ಯರು ಸಭೆಗೆ ತಪ್ಪದೆ ಹಾಜರಾಗುವಂತೆ ಆದೇಶ ಹೊರಡಿಸಿದ್ದಾರೆ.