ಭೂ ಮಾಲಿಕರಿಗೆ ಪರಿಹಾರ ನೀಡದ ರಾಜ್ಯ ಸರ್ಕಾರ: ಹೈಕೋರ್ಟ್ ಆಕ್ರೋಶ
ಬೆಂಗಳೂರು: ಭೂ ಮಾಲಿಕರಿಗೆ ಪರಿಹಾರ ನೀಡದ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ನಡೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾರಾಟ ವಲಯಕ್ಕೆ ತೀರಾ ಹತ್ತಿರವಿದ್ದ ಐದು ಎಕರೆ ಜಮೀನನ್ನು ವಶಪಡಿಸಿಕೊಂಡು, ಪರಿಹಾರ ನೀಡದೇ ಇರುವ ಸಂಬಂಧ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಗಳಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂ.ಗುರುಪ್ರಸಾದ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಸರ್ಕಾರ ಮತ್ತು ಕೆಐಎಡಿಬಿಯ ವರ್ತನೆ ಊಳಿಗಮಾನ್ಯ ವ್ಯವಸ್ಥೆಯ ಸಂಕೋಲೆಯನ್ನು ಬಲಪಡಿಸುವಂತಿದೆ.
ಸುದೀರ್ಘ ಕಾಲ ಪರಿಹಾರ ಪಾವತಿಸದಕ್ಕೆ ‘ನ್ಯಾಯಸಮ್ಮತ ಪರಿಹಾರ, ಭೂ ಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ಪುನರ್ವಸತಿ ಕಾಯ್ದೆ-2013ರ ಅಡಿಯಲ್ಲಿ ಪರಿಹಾರವನ್ನು ಮೊತ್ತವನ್ನು ಮರು ನಿಗದಿಪಡಿಸಬೇಕು. ಶೇ.12ರಷ್ಟು ಬಡ್ಡಿದರ ಪಾವತಿಸಬೇಕು ಹಾಗೂ ಇತರೆ ನಿಗದಿತ ಸೌಲಭ್ಯ ಕಲ್ಪಿಸಬೇಕು. ವಶಪಡಿಸಿಕೊಂಡ ಪ್ರತಿ ಎಕರೆಗೆ ತಲಾ .25 ಸಾವಿರ ದಂಡ ನೀಡಬೇಕು. ಈ ಆದೇಶವನ್ನು ಮೂರು ತಿಂಗಳಲ್ಲಿ ಪಾಲಿಸಬೇಕು. ತಪ್ಪಿದರೆ ಹೆಚ್ಚುವರಿಯಾಗಿ ಶೇ.2ರಷ್ಟುಬಡ್ಡಿದರ ಪಾವತಿಸಬೇಕು. ಆ ಹಣವನ್ನು ಪರಿಹಾರ ಪಾವತಿಸಲು ವಿಳಂಬ ಮಾಡಿದ ರಾಜ್ಯ ಸರ್ಕಾರ ಮತ್ತು ಕೆಐಎಡಿಬಿಯ ತಪ್ಪಿತಸ್ಥರ ಅಧಿಕಾರಿಗಳಿಂದ ವಸೂಲಿ ಮಾಡಬೇಕು’ ಎಂದು ನಿರ್ದೇಶಿಸಿದೆ.