ದೇಶದಲ್ಲಿ ತಾಪಮಾನ ಹೆಚ್ಚಳ: ಮಹಾ ಬಿಸಿಲಿನ ಝಳಕ್ಕೆ ಮೃತರ ಸಂಖ್ಯೆ 13ಕ್ಕೇರಿಕೆ
ನವದೆಹಲಿ: ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣದ ಹಲವು ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯ ಬೀರಿದೆ. ಹಲವು ರಾಜ್ಯಗಳಲ್ಲಿ ಗರಿಷ್ಠ ಉಷ್ಣಾಂಶ 40-43 ಡಿ.ಸೆ.ವರೆಗೂ ತಲುಪಿದ್ದು ಜನರನ್ನು ಹೈರಾಣಾಗಿಸಿದೆ.
ಹೀಗಾಗಿ ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕೆಲ ದಿನಗಳ ರಜೆ ಘೋಷಿಸಲಾಗಿದೆ. ಭಾರತದ ಪೂರ್ವ ರಾಜ್ಯಗಳಲ್ಲಿ ಬಿಸಿಗಾಳಿ ಇನ್ನೂ 4 ದಿನಗಳ ಕಾಲ ಮುಂದುವರೆಯಲಿದ್ದು, ವಾಯುವ್ಯ ಭಾಗದಲ್ಲಿ ಇನ್ನೆರಡು ದಿನದಲ್ಲಿ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೆಹಲಿಯಲ್ಲಿ ಗರಿಷ್ಠ ತಾಪಮಾನ (Temparature) 40.4 ಡಿಗ್ರಿ ಸೆ., ಏರಿಕೆಯಾಗಿದೆ. ಬಿಹಾರದ 5 ಪ್ರದೇಶಗಳಲ್ಲಿ 43 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ರಾಜಸ್ಥಾನದ ಹಲವು ಭಾಗಗಳಲ್ಲಿ 39ರಿಂದ 41 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ಅಲ್ಲದೇ ದಕ್ಷಿಣದ ಆಂಧ್ರ ಪ್ರದೇಶದಲ್ಲೂ 38ರಿಂದ 41 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ಒಡಿಶಾದಲ್ಲೂ ಗರಿಷ್ಠ 43 ಡಿಗ್ರಿ ಸೆ., ತಾಪಮಾನ ದಾಖಲಾಗಿದ್ದು, ರಾಜ್ಯದ 10 ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆ., ಮೀರಿದೆ. ಮಹಾರಾಷ್ಟ್ರದಲ್ಲಿ ನಡೆದ ‘ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಿಸಿಲಿನ ಧಗೆಗೆ ತುತ್ತಾಗಿ ಚಿಕಿತ್ಸೆ (Treatment) ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಯೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 13ಕ್ಕೆ ತಲುಪಿದೆ. ಈ ನಡುವೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ 20 ಜನರಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.