ಇಂದು ನಡೆಯಬೇಕಿದ್ದ ಒಕ್ಕಲಿಗರ ಸಂಘದ ಸಭೆ ಮುಂದೂಡಿಕೆ
ಬೆಂಗಳೂರು ; ಇಂದು ನಡೆಯಬೇಕಿದ್ದ ಒಕ್ಕಲಿಗರ ಸಂಘದ ಸಭೆ ಮುಂದೂಡಲು ಹೈಕೋರ್ಟ್ ಆದೇಶ ಹೊರಡಿಸಿದೆ.ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮೇಲ್ಮನವಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ರಾಜಗೋಪಾಲ, ಉದಯ ಹೊಳ್ಳ ಮತ್ತು ಅಶೋಕ ಹಾರನಹಳ್ಳಿ ಅವರು, ‘ಕೆಂಚಪ್ಪಗೌಡ ನೇತೃತ್ವದ ಸಮಿತಿ ಕರೆದಿದೆ ಎನ್ನಲಾಗುವ 2023ರ ಜುಲೈ 5ರ ಕಾರ್ಯಕಾರಿ ಸಮಿತಿಯ ಸಭೆ ಬಗ್ಗೆ ಆಡಳಿತ ಮಂಡಳಿಯ ಇತರೆ ಸದಸ್ಯರಿಗೆ ಯಾವುದೇ ಪೂರ್ವ ನೋಟಿಸ್ ನೀಡಿಲ್ಲ.
ಹೀಗಾಗಿ, ಈ ಸಭೆಯನ್ನು ಮುಂದೂಡಬೇಕು’ ಎಂದು ಒಕ್ಕೊರಲಿನ ವಾದ ಮಂಡಿಸಿದರು
ಇದಕ್ಕೆ ಪ್ರತಿಯಾಗಿ ಪ್ರತಿವಾದಿಗಳ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ, ವಿವೇಕ್ ರೆಡ್ಡಿ, ಡಿ.ಆರ್.ರವಿಶಂಕರ್, ‘ಸಭೆಯನ್ನು ಮುಂದೂಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ಮೇಲ್ಮನವಿದಾರರ ಮೂಲ ಉದ್ದೇಶವೇ ಬೇರೆ ಇದೆ. ಸಂಘವು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸದ ಹೆಗ್ಗಳಿಕೆ ಹೊಂದಿದ್ದು, ಹಲವಾರು ಶೈಕ್ಷಣಿಕ ವಿದ್ಯಾಸಂಸ್ಥೆಗಳು, ಸಾವಿರಾರು ನೌಕರರು ಇದ್ದಾರೆ. ಕಳೆದ ಮೂರು ತಿಂಗಳಿಂದ ಸಭೆ ನಡೆದಿಲ್ಲ. ಹೀಗಾಗಿ, ಸಂಘದ ದೈನಂದಿನ ಚಟುವಟಿಕೆಗಳ ನಿರ್ವಹಣೆಗಾಗಿ ಸಭೆ ನಡೆಯುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ‘ರಾಜ್ಯದ ಅತ್ಯಂತ ಹಳೆಯದಾದ ಸಂಘ ಎನಿಸಿರುವ ಒಕ್ಕಲಿಗರ ಸಂಘವು ತನ್ನ ಧ್ಯೇಯೋದ್ದೇಶ ಮತ್ತು ಆಶಯಗಳ ಈಡೇರಿಕೆಗೆ ತಕ್ಕನಾಗಿ ನಡೆದುಕೊಳ್ಳುತ್ತಿದೆಯೇ ಎಂಬುದನ್ನು ಸಂಘದ ಎಲ್ಲ 35 ಸದಸ್ಯರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರಲ್ಲದೆ, ಇದೇ 5ರಂದು ಕರೆಯಲಾಗಿರುವ ಕಾರ್ಯಕಾರಿ ಸಮಿತಿಯ ಸಭೆಯನ್ನು ಮುಂದೂಡಿ ಅಂತಿಮ ತೀರ್ಪನ್ನು ಕಾಯ್ದಿರಿಸಿದರು.