ಬಿಜೆಪಿಗೂ ಕಾಂಗ್ರೆಸ್ ಗೂ ಅಜಗಜಾಂತರ ವ್ಯತ್ಯಾಸವಿದೆ: ಸಚಿವ ಡಾ. ಕೆ ಸುಧಾಕರ್
ಬೆಂಗಳೂರು: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಆಡಳಿತ ವಿರೋಧಿ ಅಲೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಣತಂತ್ರ ಮಾಡಬೇಕಾಗುತ್ತದೆ. ಎಲ್ಲರಿಗಿಂತ ಮೊದಲು ಪಟ್ಟಿ ಬಿಡುಗಡೆ ಮಾಡಿದಾಕ್ಷಣ ಗೆಲ್ಲುತ್ತೇವೆ ಎಂದರ್ಥವಲ್ಲ.
ಬಿಜೆಪಿಗೆ ತನ್ನದೇ ಆದ ತಂತ್ರವಿದೆ. ಅಭ್ಯರ್ಥಿಗಳ ನಡುವೆ ಜಗಳ, ಚೇರ್ಗಳು ಮುರಿದುಹೋಗುವಂತಹ ಘಟನೆಗಳು ಬೇರೆ ಪಕ್ಷಗಳಲ್ಲಿ ನಡೆಯುತ್ತಿದೆ. ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ. ಕಾಂಗ್ರೆಸ್ನಲ್ಲಿ ಯಾರೋ ಪ್ರಣಾಳಿಕೆಯನ್ನು ಬರೆದುಕೊಟ್ಟು, ಅದನ್ನು ಒಂದನೇ ಗ್ಯಾರಂಟಿ,
ಎರಡನೇ ಗ್ಯಾರಂಟಿ ಎಂದು ಓದುತ್ತಾ ಹೋದರು. ಬಿಜೆಪಿ ಈ ರೀತಿ ಮಾಡಿಲ್ಲ. ಪ್ರಣಾಳಿಕೆ ರೂಪಿಸಲು ಬಿಜೆಪಿ ಜನರ ಮುಂದೆ ಹೋಗಿದೆ. ರೈತರು, ಸಣ್ಣ ಕೈಗಾರಿಕಾ ಉದ್ಯಮಿಗಳು, ಕಾರ್ಮಿಕರು ಮೊದಲಾದ ವರ್ಗದ ಜನರ ಕಷ್ಟಗಳನ್ನು ಆಲಿಸಿ, ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್ ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಬಿಜೆಪಿಯ ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವಾಗಲೂ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಈ ಬಾರಿ ಅದನ್ನು ಮೀರಿ ಪಕ್ಷಕ್ಕೆ ಬೆಂಬಲ ದೊರೆಯಲಿದೆ ಎಂದು ಹೇಳಿದ್ದಾರೆ.