ಇಂದು ಪತ್ರಿಕಾ ದಿನಾಚರಣೆ..

0

ಪ್ರತಿ ವರ್ಷ ಜುಲೈ 1 ರಂದು ನಮ್ಮ ರಾಜ್ಯದಲ್ಲಿ `ಪತ್ರಿಕಾ ದಿನ’ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.ಮಂಗಳೂರಿನಿಂದ ಕಲ್ಲಚ್ಚಿನಲ್ಲಿ ಪ್ರಸರಣಗೊಳ್ಳುತ್ತಿದ್ದ ‘ಮಂಗಳೂರ ಸಮಾಚಾರ’ ಪತ್ರಿಕೆ ಪ್ರಾರಂಭಗೊಂಡ ಒಂದು ವರ್ಷದ ಬಳಿಕ ಅಂದರೆ 1844ರ ಮಾರ್ಚ್ ತಿಂಗಳಲ್ಲಿ ಬಳ್ಳಾರಿ ಕಾಗದ ಮುದ್ರಣಾಲಯದಲ್ಲಿ ಮುದ್ರಿಸುವ ಉದ್ದೇಶದಿಂದ ಬಳ್ಳಾರಿಗೆ ವರ್ಗಾಯಿಸಲಾಯಿತು. ಇಲ್ಲಿ ಪತ್ರಿಕೆಗೆ ‘ಕನ್ನಡ ಮಿಷನರಿ ಸಮಾಚಾರ’ ಎಂದು ಮರು ನಾಮಕರಣಗೊಳಿಸಲಾಯಿತು. ಇಲ್ಲಿ ಮೊಗ್ಲಿಂಗ್ ಅವರ ಆಪ್ತನಾಗಿದ್ದ ಇನ್ನೊಬ್ಬ ಮಿಷನರಿ ರೀಡ್ ಎಂಬಾತ ಪತ್ರಿಕೆಯ ಪ್ರಕಟಣೆ ಜವಾಬ್ದಾರಿ ಹೊತ್ತುಕೊಂಡರು. ಆದರೆ ರೀಡ್ ಅವರ ಮರಣಾನಂತರ ಪತ್ರಿಕೆಯ ಪ್ರಸರಣಕ್ಕೆ ತೀವ್ರ ಹೊಡೆತ ಬಿತ್ತು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪತ್ರಿಕೆ ಅಲ್ಲಿ ಬಾಳಲಿಲ್ಲ.

ದೇಶದ ಸ್ವಾತಂತ್ರ್ಯ ಹಾಗೂ ಏಕತೆಯ ಹಿನ್ನಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮೊಗ್ಲಿಂಗ್ 1857ರಲ್ಲಿ ‘ಕನ್ನಡ ಸುವಾಟಿಕ’ ಎಂಬ ಇನ್ನೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಎರಡು ವರ್ಷದ ಬಳಿಕ ಅದೂ ಕೂಡಾ ನಿಂತಿತು. ಸಮರ್ಪಕ ಸಂಪರ್ಕ ಸಾಧನಗಳಿಲ್ಲದ ಪ್ರಾಚೀನ ಶಿಲಾಯುಗದ ಕಾಲದಲ್ಲಿ ಕನ್ನಡ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಕನ್ನಡ ಪತ್ರಿಕಾ ರಂಗಕ್ಕೆ ಮುನ್ನುಡಿ ಬರೆದ ಕನ್ನಡ ಪತ್ರಿಕಾ ರಂಗದ ಮೂಲ ಪುರುಷ ಎಂದೇ ಗುರುತಿಸಿಕೊಂಡಿರುವ ಮೊಗ್ಲಿಂಗ್ ಲೇಖಕ, ಸಾಹಿತಿ, ಇತಿಹಾಸಕಾರ, ತರ್ಜುಮೆದಾರ ಹಾಗೂ ಸಂಗ್ರಹಕಾರರಾಗಿಯೂ ವಿಶೇಷ ಗುಣವನ್ನು ಮೈಗೂಡಿಸಿಕೊಂಡಿದ್ದವರು. ಮೂಲತಃ ಜರ್ಮನಿ ದೇಶದ ಬ್ರಾಕನ್ ಹೀಮ್ ಎಂಬ ಗ್ರಾಮದಲ್ಲಿ ವಿಲೆಲ ಲುಡವಿಗ ಫೆಡ್ರಿಕ್ ಮೊಗ್ಲಿಂಗ್ ಹಾಗೂ ರೀಸೆ ದಂಪತಿಯ ಪುತ್ರನಾಗಿ 1811 ರಲ್ಲಿ ಜನಿಸಿದ ‘ರೆವರೆಂಡ್ ಹರ್ಮನ್ ಫೆಡರಿಂಗ್ ಮೊಗ್ಲಿಂಗ್’ 1834 ರಲ್ಲಿ ತನ್ನ ವ್ಯಾಸಂಗವನ್ನು ಮುಗಿಸಿ ಧರ್ಮ ಪ್ರಚಾರಕರಾಗಿ ಸೇವೆಯನ್ನು ಪ್ರಾರಂಭಿಸಿದ್ದರು. 1836ರಲ್ಲಿ ಇಂಗ್ಲಂಡ್‍ನಿಂದ ಭಾರತಕ್ಕೆ ಆಗಮಿಸಿದ ಮೊಗ್ಲಿಂಗ್ ಅದಾಗಲೇ ಮಂಗಳೂರಿನಲ್ಲಿ ಕಾರ್ಯಪ್ರವೃತ್ತವಾಗಿದ್ದ ಬಾಶೆಲ್ ಮಿಷನ್‍ನೊಂದಿಗೆ ಸೇರಿಕೊಂಡು ಧರ್ಮ ಪ್ರಚಾರದಲ್ಲಿಯೇ ತೊಡಗಿಸಿಕೊಂಡಿದ್ದರು.

1837ರಲ್ಲಿ ಧಾರವಾಡಕ್ಕೆ ಆಗಮಿಸಿ ಶಾಲೆಯನ್ನೂ ಆರಂಭಿಸಿದ ಮೊಗ್ಲಿಂಗ್ ಧರ್ಮಪ್ರಚಾರ ಹಾಗೂ ಸಮಾಜ ಸೇವೆಯಿಂದ ಮಾತ್ರ ಜನ ಸೇವೆ ಸಾಧ್ಯವಿಲ್ಲ ಎಂದು ಮನಗಂಡು ಜಗತ್ತಿನ ನಾಲ್ಕು ದಿಸೆಗಳಿಂದ ಮಾಹಿತಿ ಸಂಗ್ರಹಿಸಿ ಜನರಿಗೆ ನೀಡಿದಾಗ ಇನ್ನಷ್ಟು ತೃಪ್ತಿ ದೊರೆಯಬಹುದೆಂದು ಭಾವಿಸಿದ ಪರಿಣಾಮ 4 ಪುಟಗಳ ಅಂದಿನ ಒಂದಾಣೆ (ನಾಲ್ಕು ಪೈಸೆ)ಯ ‘ಮಂಗಳೂರು ಸಮಾಚಾರ ಪತ್ರಿಕೆ’ ರೂಪದಳೆಯಿತು.

ಮೊಗ್ಲಿಂಬ್ ಓರ್ವ ಧರ್ಮ ಪ್ರಚಾರಕ್ಕಾಗಿದ್ದರೂ ಪತ್ರಿಕೆಯನ್ನು ಕ್ರೈಸ್ತ ಧರ್ಮದ ಪ್ರಚಾರಕ್ಕೋ ಅಥವಾ ಯಾವುದೇ ಧಾರ್ಮಿಕ ಉದ್ದೇಶಗಳಿಗೆ ಬಳಸಿಕೊಳ್ಳದೆ ಪ್ರತಿಯೊಂದು ಧರ್ಮೀಯರ ಅಂತರಾಳವನ್ನು ಬಿಚ್ಚಿಡಲು ಅವಕಾಶ ನೀಡಿದ್ದರು. ಪತ್ರಿಕೆಯ ಮುಖಾಂತರ ಪತ್ರಿಕಾ ಧರ್ಮ ಹಾಗೂ ಲಾಭಗಳಿಕೆ ನಡುವೆ ಸಮಾನ ಅಂತರವನ್ನು ಕಾಯ್ದುಕೊಂಡು ಬಂದ ಮೊಗ್ಲಿಂಗ್ ಸಮಾಜದಲ್ಲಿ ಆರೋಗ್ಯಕರ ಸಮತೋಲನಕ್ಕೆ ಒತ್ತು ನೀಡಿದ್ದರು.

19ನೇ ಶತಮಾನದಲ್ಲಿ ಬಾಳಿ ಬದುಕಿದ ಕನ್ನಡ ಪತ್ರಿಕೋದ್ಯಮದ ಪಿತಾಮಹ ಮೊಗ್ಲಿಂಗ್ ಜರ್ಮನ್ ಮೂಲದವನಾದರೂ ಕನ್ನಡದಲ್ಲಿ ಅಪಾರ ಆಸಕ್ತಿ ಹಾಗೂ ಪ್ರೀತಿನ್ನಿಟ್ಟುಕೊಂಡು ಕನ್ನಡ ಭಾಷೆಗೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ಮೊದಲಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ ಹೆಗ್ಗಳಿಕೆ ಕೂಡಾ ಮೊಗ್ಲಿಂಗ್‍ಗೆ ಸಲ್ಲುತ್ತದೆ. ಈತ ಮಂಗಳೂರಿಗೆ ಬಂದು ರಚಿಸಿದ ಚೊಚ್ಚಲ ‘ಬಿಬ್ಲಿಯಾಥೆಕಾ ಕರ್ನಾಟಕ’ ಎಂಬ ಗ್ರಂಥವು ಜರ್ಮನಿವರೆಗೂ ತಲುಪಿತು. ಈತ ಕನ್ನಡಕ್ಕಾಗಿ ಸಲ್ಲಿಸಿದ ಮಹತ್ತರ ಕಾರ್ಯಕ್ಕಾಗಿ 1858ರಲ್ಲಿ ‘ಗೌರವ ಡಾಕ್ಟರೇಟ್’ ಪ್ರಶಸ್ತಿಯೂ ಒಲಿದು ಬಂತು. ಕನ್ನಡ ಪರ ಸೇವೆಗಾಗಿ ದೊರೆತ ಮೊತ್ತ ಮೊದಲ ಡಾಕ್ಟರೇಟ್ ಪದವಿ ಇದಾಗಿತ್ತು ಎಂಬುದನ್ನಿಲ್ಲಿ ಪ್ರಸ್ತಾಪಿಸಲೇಬೇಕು.

ಕನ್ನಡಕ್ಕಾಗಿ ತೋರಿದ ಪ್ರೀತಿ, ಅಭಿಮಾನ, ಆಸಕ್ತಿ ಮೊಗ್ಲಿಂಗೇತರ ಇನ್ಯಾವ ವಿದೇಶಿಯರಲ್ಲೂ ಕಂಡು ಬಂದಿಲ್ಲ ಎಂಬುದು ಕೂಡಾ ಅಷ್ಟೇ ಪ್ರಾಮುಖ್ಯವನ್ನು ಪಡೆಯುತ್ತದೆ. ಓರ್ವ ವಿದೇಶಿಗನಾಗಿ, ಅದರಲ್ಲೂ ಓರ್ವ ಧರ್ಮ ಪ್ರಚಾರಕನಾಗಿ ಭಾರತಕ್ಕೆ ಬಂದು ಕನ್ನಡಕ್ಕಾಗಿ ಇನ್ನಿಲ್ಲದ ಶ್ರಮವಹಿಸಿ ಕನ್ನಡ ಪತ್ರಿಕೋದ್ಯಮದ ಮೂಲಪುರುಷನಾಗಿ ಹೆಸರು ಪಡೆದ ‘ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್’ 1881ರಲ್ಲಿ ತನ್ನ ಜೀವಿತದ 70ನೇ ಸಂವತ್ಸರದಲ್ಲಿ ಈ ಲೋಕಕ್ಕೆ ವಿದಾಯ ಹೇಳಿದರು. ಇವರÀ ಸಮಾಧಿ ಜರ್ಮನಿ ದೇಶದಲ್ಲಿದೆ.

‘ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್’ ಮುನ್ನುಡಿ ಬರೆದ ಕನ್ನಡ ಪತ್ರಿಕಾ ರಂಗಕ್ಕೆ ಇದೀಗ 174 ವಸಂತಗಳೇ ಸಂದುತ್ತಿವೆ. ಇಂದಿಗೂ ಕನ್ನಡ ಪತ್ರಿಕಾ ರಂಗವು ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿ, ಸಮಾಜದ ಅಂಕು-ಡೊಂಕುಗಳ ಕೈಗನ್ನಡಿಯಾಗಿ ಸಮಾಜದ ಎಲ್ಲ ಆಗು-ಹೋಗುಗಳ ಬಗ್ಗೆ ಸ್ಪಷ್ಟ ಬೆಳಕನ್ನು ಚೆಲ್ಲುವ ಮೂಲಕ ಸಮಾಜ ಸುಧಾರಣೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.

ತಮ್ಮ ಮೂಗಿನ ನೇರಕ್ಕೆ ಸುದ್ದಿ, ಲೇಖನಗಳು ಪ್ರಕಟಗೊಳ್ಳುತ್ತಿಲ್ಲ ಹಾಗೂ ಸಮಾಜದ ಏರು-ಪೇರುಗಳನ್ನು, ಆಡಳಿತ ವರ್ಗದ ವೈಫಲ್ಯಗಳನ್ನು ಯಥಾವತ್ ಅನಾವರಣಗೊಳಿಸಲಾಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಪತ್ರಿಕೆಗಳ ಹಾಗೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಅಧಿಕಾರದ ಗದ್ದುಗೆಯಲ್ಲಿರುವ ಮಂದಿಗಳು ಮಾಡುತ್ತಿರುವ ಒಂದೆರಡು ಪ್ರಕರಣಗಳು ಕಂಡು ಬರುತ್ತಿದೆಯಾದರೂ ಅವೆಲ್ಲವನ್ನೂ ಯಶಸ್ವಿಯಾಗಿ ಮೆಟ್ಟಿನಿಂತು ಕನ್ನಡ ಪತ್ರಿಕಾ ರಂಗ ಇಂದಿಗೂ ತನ್ನ ಗಂಭೀರತೆಯನ್ನು, ಪ್ರಾಮುಖ್ಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಎಲ್ಲ ಏಳು-ಬೀಳುಗಳ ಮಧ್ಯೆ ಕನ್ನಡ ಪತ್ರಿಕಾರಂಗ ಇದೀಗ ಒಂದೂಮುಕ್ಕಾಲು ಶತಮಾನ ದಾಟಿ ಮುನ್ನಡೆಯುತ್ತಿರುವುದು ಸಾಧನೆಯೇ ಸರಿ.

About Author

Leave a Reply

Your email address will not be published. Required fields are marked *

You may have missed