ಮಣಿಪುರದಲ್ಲಿ ಹಿಂಸಾಚಾರ: ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದೇನು..?
ಇಂಫಾಲ: ಕಳೆದ ಹಲವು ದಿನಗಳಿಂದ ಈಶಾನ್ಯ ಭಾಗದ ರಾಜ್ಯ ಮಣಿಪುರದಲ್ಲಿ ಹಿಂಸಾಚಾರ (Manipur Violence) ಮುಂದುವರಿ ಯುತ್ತಲೇ ಇದ್ದು, ಇದೀಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ (President’s Rule) ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಭಾನುವಾರ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ತರೂರ್, ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಂತೆ ಬಲ ಚಿಂತನೆಯುಳ್ಳ ಭಾರತೀಯರು ತಮಗೆ ಭರವಸೆ ನೀಡಿದ್ದ ಉತ್ತಮ ಆಡಳಿತಕ್ಕೆ ಏನಾಯ್ತು ಎಂಬುದನ್ನು ತಮಗೆ ತಾವೇ ಕೇಳಿಕೊಳ್ಳಬೇಕು.
ಮಣಿಪುರದ ಮತದಾರರು ತಮ್ಮ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕೇವಲ 1 ವರ್ಷದ ಬಳಿಕ ದೊಡ್ಡ ದ್ರೋಹವನ್ನು ಅನುಭವಿಸುತ್ತಿದ್ದಾರೆ. ಆಯ್ಕೆಯಾಗಿರುವುದಕ್ಕೆ ಕಾರಣವಾದ ಕೆಲಸಗಳನ್ನೇ ರಾಜ್ಯ ಸರ್ಕಾರ ಮಾಡಲು ಸಿದ್ಧವಾಗಿಲ್ಲ. ಇದೀಗ ರಾಷ್ಟ್ರಪತಿಗಳು ಆಳ್ವಿಕೆ ನಡೆಸಲು ಸಮಯ ಬಂದಿದೆ ಎಂದು ಹೇಳಿದ್ದಾರೆ. ಬುಧವಾರ ಮಣಿಪುರದ ಆದಿವಾಸಿಗಳು ಹಾಗೂ ಬಹುಸಂಖ್ಯಾತ ಮೈತೆ ಸಮುದಾಯಕ್ಕೆ ಸೇರಿದ ಜನರ ನಡುವೆ ಹಿಂಸಾತ್ಮಕ ಘರ್ಷಣೆ ಪ್ರಾರಂಭವಾಯಿತು. ಪರಿಣಾಮ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ಘರ್ಷಣೆಯಲ್ಲಿ 54 ಜನರು ಸಾವನ್ನಪ್ಪಿದ್ದಾರೆ.