ಹಿಂದೂ, ಹಿಂದುತ್ವ ಎರಡು ಒಂದೇ ಇದನ್ನು ಅರ್ಥಮಾಡಿಕೊಳ್ಳಲಿ: ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್
ಬೆಂಗಳೂರು: ಬಿಜೆಪಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾನನಷ್ಟ ಆಗುವ ಕೆಲಸ ಮಾಡಿದ್ದಾರೆಂದು ಇದರಿಂದ ಗೊತ್ತಾಗುತ್ತೆ.
ಸಿದ್ದರಾಮಯ್ಯ ಹೇಳಿಕೆಗಳನ್ನು ನಾವು ಜನರ ಮುಂದೆ ಇಟ್ಟಿದ್ದೇವೆ. ಧರ್ಮ ಒಡೆಯುವ ಕೆಲಸ, ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಹಿಂದುತ್ವ ಎಂಬುದು ನಮ್ಮತನ,
ಇದನ್ನು ಜನರಿಗೆ ಹೇಳುತ್ತೇವೆ ಅಷ್ಟೇ ಎಂದು ಹೇಳಿದರು. ಇದೇ ವೇಳೆ ನಾನು ಹಿಂದುತ್ವದ ವಿರುದ್ಧ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಹಿಂದೂ, ಹಿಂದುತ್ವ ಎರಡು ಒಂದೇ ಇದನ್ನು ಅರ್ಥಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಪುಸ್ತಕ ಬಿಡುಗಡೆ ವಿಚಾರವಾಗಿ ಮಾತನಾಡಿ, ಅವರು ಕೂಡ ಜನರಿಗೆ ಪುಸ್ತಕ ತಲುಪಿಸಲು ಅಡ್ಡಿಪಡಿಸುವುದಿಲ್ಲ. ಕಾನೂನು ಉಲ್ಲಂಘಿಸುವ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದರು.