ಮಕ್ಕಳು ಕೈಬಿಟ್ಟಿದ್ದಕ್ಕೆ 1.5 ಕೋಟಿ ರೂ. ಮೊತ್ತದ ಆಸ್ತಿಯನ್ನು ಸರ್ಕಾರಕ್ಕೆ ಬರೆದ ವೃದ್ಧ..!

0

ಕ್ನೋ: ವೃದ್ಧನೊಬ್ಬ ತಮ್ಮ ಮಕ್ಕಳು ಕೈಬಿಟ್ಟಿದ್ದಕ್ಕೆ ಮನನೊಂದು 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.

ಮುಜಾಫರ್‌ನಗರದ ನಿವಾಸಿಯಾದ 85 ವರ್ಷದ ನಾಥು ಸಿಂಗ್ ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಬರೆದಿರುವ ವ್ಯಕ್ತಿ. ನಾಥು ಸಿಂಗ್ ಒಟ್ಟು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನನಲ್ಲಿ ತಮ್ಮ ಪತ್ನಿ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಜೊತೆಗೆ ಇವರಿಗೆ ಓರ್ವ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ನಾಥುಸಿಂಗ್ ಪುತ್ರ ಶಾಲಾ ಶಿಕ್ಷಕನಾಗಿ ಸಹರಾನ್‍ಪುರದಲ್ಲಿ ವಾಸವಾಗಿದ್ದ. ಉಳಿದ ನಾಲ್ವರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿತ್ತು.

ಇದಾದ ಬಳಿಕ ನಾಥುಸಿಂಗ್ ಅವರ ಪತ್ನಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಳು. ಅದಾದ ಕೆಲವೇ ದಿನಗಳಲ್ಲಿ ನಾಥುಸಿಂಗ್ ಐವರು ಮಕ್ಕಳಿದ್ದರೂ ಒಂಟಿ ಜೀವನ ನಡೆಸಲು ಪ್ರಾರಂಭಿಸಿದರು. ಈ ಒಂಟಿತನದಿಂದಾಗಿ ಬೇಸತ್ತು ಸುಮಾರು 7 ತಿಂಗಳ ಹಿಂದೆ ತಮ್ಮ ಗ್ರಾಮದಲ್ಲೇ ಇರುವ ವೃದ್ಧಾಶ್ರಮಕ್ಕೆ ಸೇರಿದರು. ಈ ವೇಳೆಯೂ ನಾಥುಸಿಂಗ್‍ನನ್ನು ಭೇಟಿ ಮಾಡಲು ಅವರ ಮಕ್ಕಳು ಯಾರು ಬಂದಿರಲಿಲ್ಲ. ಇದರಿಂದಾಗಿ ಬೇಸರಗೊಂಡ ನಾಥುಸಿಂಗ್ ತಮ್ಮ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರದ ಹೆಸರಿಗೆ ವಿಲ್ ಮಾಡಲು ನಿರ್ಧರಿಸಿದರು.

ತಾವು ಯೋಚಿಸಿದಂತೆ ಇದೀಗ ಉತ್ತರಪ್ರದೇಶ ಸರ್ಕಾರಕ್ಕೆ ತಮ್ಮ ಸಮಸ್ತ ಆಸ್ತಿಯನ್ನು ವಿಲ್ ಮಾಡಿದ್ದು, ಮರಣದ ನಂತರ ಆ ಜಮೀನಿನಲ್ಲಿ ಶಾಲೆ ಹಾಗೂ ಆಸ್ಪತ್ರೆಯನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಲ್‍ನಲ್ಲಿ, ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕು. ಜೊತೆಗೆ ಅಂತಿಮ ವಿಧಿವಿಧಾನ ನಡೆಯುವಾಗ ಮಗ ಹಾಗೂ ನಾಲ್ವರು ಪುತ್ರಿಯರಿಗೆ ಪಾಲ್ಗೊಳ್ಳಲು ಬಿಟ್ಟುಕೊಳ್ಳಬಾರದು ಎಂದು ಬರೆದಿದ್ದಾರೆ. ಈ ಬಗ್ಗೆ ಮಾತನಾಡಿದ ನಾಥುಸಿಂಗ್, ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ವರ್ಗಾಯಿಸಲು ನನ್ನ ಮನಸ್ಸು ಮಾಡಿದೆ. ಈ ಎಲ್ಲ ಆಸ್ತಿಯೂ ನನ್ನ ಮರಣದ ನಂತರ ಸರ್ಕಾರಕ್ಕೆ ಸೇರಲಿದೆ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *

You may have missed