ಚಿಕಿತ್ಸೆಗೆಂದು ಕರೆತರಲಾಗಿದ್ದ ಪಾಪಿ ಆರೋಪಿಯಿಂದ ಚಾಕು ಇರಿತ – ವೈದ್ಯೆ ಸಾವು
ತಿರುವನಂತಪುರಂ: ಪೊಲೀಸ್ ಕಸ್ಟಡಿಯಿಂದ ಆರೋಪಿಯನ್ನು ಚಿಕಿತ್ಸೆಗೆ ಕರೆತಂದಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ (Doctor) ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ (Kerala) ಬುಧವಾರ ನಡೆದಿದೆ.
ಮೃತ ವೈದ್ಯೆಯನ್ನು ವಂದನಾ ದಾಸ್ (23) ಎಂದು ಗುರುತಿಸಲಾಗಿದೆ. ಅವರು ಕೊಲ್ಲಮ್ನಲ್ಲಿ ಫೈನಲ್ ಇಯರ್ ನ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನೆಡುಂಬನಾದ ಶಾಲಾ ಶಿಕ್ಷಕ ಸಂದೀಪ್ (42) ಎಂದು ಗುರುತಿಸಲಾಗಿದೆ. ಆರೋಪಿ ವೈದ್ಯೆಗೆ ಆರು ಬಾರಿ ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮದ್ಯ ಸೇವನೆ ಮಾಡಿ ನೆರೆಹೊರೆಯವರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಗಲಾಟೆ ಮಾಡುತ್ತಿದ್ದ ಮಾಹಿತಿ ಬಂದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ನಂತರ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತೀವ್ರ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ. ಚಿಕಿತ್ಸೆ ವೇಳೆ ಪೊಲೀಸರಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡದ ಕಾರಣ ನಾವು ಹೊರಗೆ ಇರಬೇಕಾಯಿತು. ಈ ವೇಳೆ ಆರೋಪಿ ವೈದ್ಯೆಯನ್ನು ಅಟ್ಟಿಸಿಕೊಂಡು ಬಂದಿದ್ದಾನೆ. ಪೊಲೀಸರು ತಡೆಯಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ನಂತರ ಆತನನ್ನು ತೀವ್ರ ಹರಸಾಹಸ ಪಟ್ಟು ಬಂಧಿಸಲಾಯಿತು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಭಾರತೀಯ ವೈದ್ಯರ ಸಂಘಟನೆ (Indian Medical Association) ತೀವ್ರ ಆಕ್ರೋಶ ಹೊರಹಾಕಿದೆ. ಆರೋಪಿಗಳು ಹಾಗೂ ಅಪರಾಧಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೋಳ ತೊಡಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶವಿದೆ. ಆದರೂ ಸಹ ಪೊಲೀಸರು ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ವೈದ್ಯರು ಆರೋಪಿಸಿದ್ದಾರೆ