2 ವರ್ಷಗಳ ಹಿಂದೆ ಹಾಕಿದ್ದ ರಸ್ತೆ ಡಾಂಬರು ಕಿತ್ತು ಹೊಸ ಡಾಂಬರು ಹಾಕಲು ಮುಂದಾದ ಬಿಬಿಎಂಪಿ
ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾವಳ್ಳಿ ವಾರ್ಡ್ನಲ್ಲಿ 2 ವರ್ಷಗಳ ಹಿಂದೆ ಹಾಕಿದ್ದ ರಸ್ತೆ ಡಾಂಬರು ಕಿತ್ತು ಹೊಸ ಡಾಂಬರು ಹಾಕಲು ಬಿಬಿಎಂಪಿ ಮುಂದಾಗಿದೆ. ಕೋವಿಡ್ ಮೊದಲ ಲಾಕ್ ಡೌನ್ನಲ್ಲಿ ಮಾವಳ್ಳಿಯ ವೆಂಕಟಸ್ವಾಮಪ್ಪ ರಸ್ತೆ, ನಂಜೇಗೌಡ ಸ್ಟ್ರೀಟ್, ರಂಗಪ್ಪ ರಸ್ತೆ, ಮಸೀದಿ ರೋಡ್ಗೆ ಸಿಮೆಂಟ್ ಕಾಂಕ್ರೀಟ್ನ ರಸ್ತೆಯನ್ನ ಹಾಕಲಾಗುತ್ತದೆ.
ಚಿಕ್ಕಪೇಟೆ ಕ್ಷೇತ್ರದ ಹಲವು ರಸ್ತೆಗಳು ಇನ್ನು 20 ವರ್ಷ ಬಾಳಿಕೆ ಬರುತ್ತಿದ್ದವು. ಆದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರಸ್ತೆಗಳನ್ನ ವಿನಾಃ ಕಾರಣ ಅಗೆದು ಜನರಿಗೆ ತೊಂದರೆ ಕೊಡುತ್ತಿದೆ. ಇದು ಅವೈಜ್ಞಾನಿಕವಾದ ಕಾಮಗಾರಿ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಏರಿಯಾದಲ್ಲಿ ರಸ್ತೆಯನ್ನ ಹೊರತುಪಡಿಸಿ ಹಲವು ಸಮಸ್ಯೆಗಳಿವೆ.
ಆದರೆ ಚೆನ್ನಾಗಿ ಇದ್ದ ರಸ್ತೆಗಳನ್ನ ಕಿತ್ತು ಹಾಕುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬ ಆರೋಪವನ್ನ ಜನರು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಡಿಎಲ್ಪಿ ಅವಧಿ ಮುಗಿದಿದೆಯಾ ಇಲ್ಲವಾ ಎಂಬುದನ್ನು ತಿಳಿಯಲು ವರದಿಯನ್ನ ನೀಡುವಂತೆ ಸಂಬಂಧಪಟ್ಟ ಇಂಜಿನಿಯರ್ಗೆ ಕೂಡಲೇ ಸೂಚನೆ ನೀಡಲಾಗಿದೆ. ರಸ್ತೆ ಸ್ಥಿತಿಗತಿ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಗುತ್ತಿಗೆದಾರರು ಹಾಗೂ ನಮ್ಮ ಅಧಿಕಾರಿಗಳು ತಪ್ಪು ಎಸಗಿದ್ದರೆ KCSR ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗಿತ್ತದೆ ಎಂದು ತಿಳಿಸಿದ್ದಾರೆ.