BJP, JDS ಕೊಡುಗೆ ಶೂನ್ಯ- ಬಹಿರಂಗ ಚರ್ಚೆಗೆ ಸಿದ್ದ – ಶಾಸಕ ವೆಂಕಟರಮಣಯ್ಯ
ದೊಡ್ಡಬಳ್ಳಾಪುರ: ರಾಜ್ಯದ ಅಭಿವೃದ್ಧಿಗೆ ಬಿಜೆಪಿ, ಜೆಡಿಎಸ್ ಪಕ್ಷದ ಕೊಡುಗೆ ಶೂನ್ಯ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಮೂರು ವರ್ಷದಲ್ಲಿ ತಾಲೂಕಿನ ಅಭಿವೃದ್ಧಿಗೆ ಒಂದೇ ಒಂದು ಯೋಜನೆ, ಕಾರ್ಯಕ್ರಮ ನೀಡಿಲ್ಲ ಎಂದು ಶಾಸಕ ಟಿ.ವೆಂಕಟರಮಣಯ್ಯ ಆರೋಪಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿಪರಿಶಿಷ್ಟ ವಿಭಾಗದ ಪದಾಧಿಕಾರಿಗಳ ಪದಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಸಕರು ಯಾವುದೇ ಅಭಿವೃದ್ಧಿ ಕೆಲಸಮಾಡಿಲ್ಲ. ಇಲಾಖೆಗಳೇ ಗೊತ್ತಿಲ್ಲ ಎಂದು ಟೀಕಿಸಿರುವ ಬಿಜೆಪಿ ಮುಖಂಡ ಧೀರಜ್ ಮುನಿರಾಜು ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. 2013-18ರ ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ, ಕಾರ್ಯಕ್ರಮ, ತಂದಿರುವ ಯೋಜನೆ ಕುರಿತು ಕ್ಯಾಲೆಂಡರ್ ನೀಡಿದ್ದು, ಮನೆ ಮನೆಗೆ ಹಂಚಿದ್ದೇನೆ. ಮೊದಲು ಕ್ಯಾಲೆಂಡರ್ ಓದಿ ಬಹಿರಂಗ ಚರ್ಚೆಗೆ ಬರಲಿ. ಸುಳ್ಳು ಆರೋಪ ಮಾಡಿಕೊಂಡು ತಿರುಗಾಡಿದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಈ ಹಿಂದಿನಿಂದಲೂ ಸ್ಥಳೀಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಹೊರಗಿನಿಂದ ಬಂದ ಚನ್ನಿಗಪ್ಪ, ಮುನೇಗೌಡರ ಪರಿಸ್ಥಿತಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಕೊನೆಗೆ ಧೀರಜ್ ಮುನಿರಾಜುಗೂ ಅದೇ ಪರಿಸ್ಥಿತಿ ಬಂದೊದಗಲಿದೆ. ನಿಮ್ಮದೇ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಯಾವ ಕೊಡುಗೆ ನೀಡಿದ್ದೀಯಾ ಎಂದು ಪ್ರಶ್ನಿಸಿದರು.
ಸಂವಿಧಾನ ಬುಡಮೇಲಿಗೆ ಹುನ್ನಾರ
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿದರು.