ರಸ್ತೆಗೆ ಜಾಗ ಉಚಿತ ನೀಡುವಂತೆ ಷರತ್ತು: ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಹೈಕೋರ್ಟ್ ಛೀಮಾರಿ
ಬೆಂಗಳೂರು: ಬಡಾವಣೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿದ ವ್ಯಕ್ತಿಗೆ ಕಾನೂನು ಬಾಹಿರ ಷರತ್ತು ವಿಧಿಸಿದ ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಬೆಂಗಳೂರಿನ ಹೈಕೋರ್ಟ್ (High Court) ಛೀಮಾರಿ ಹಾಕಿದೆ. ಪ್ರಾಧಿಕಾರದ ನಡೆ ವಸೂಲಿಗಾಗಿ ಅಧಿಕಾರ ಬಳಕೆ ಮಾಡಿಕೊಂಡಂತಿದೆ ಎಂದು ಖಾರವಾಗಿ ನುಡಿದಿದೆ.
ಉಚಿತವಾಗಿ ಜಾಗ ನೀಡುವಂತೆ ಭೂ ಮಾಲಿಕನಿಗೆ ಒತ್ತಾಯಿಸದೆ ಬಡಾವಣೆ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ನೀಡಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್, ಕಾನೂನು ಪ್ರಕಾರ ಜಾಗವನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಲು ಪ್ರಾಧಿಕಾರಕ್ಕೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರಿನ ನ್ಯೂ ಟಿಂಬರ್ ಯಾರ್ಡ್ ಬಡಾವಣೆ ನಿವಾಸಿ ವಿನೋದ್ ದಮ್ಜಿ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರ ಪೀಠ ಈ ಆದೇಶ ಮಾಡಿದೆ.