ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸಿ ಟಿ ರವಿ ವಾಗ್ದಾಳಿ
ಬೆಂಗಳೂರು: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಮುಖ್ಯಮಂತ್ರಿಗಳಿಗೆ ಕಳುಹಿಸಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನಕ್ಕೆ ಕಾಂಗ್ರೆಸ್ನವರು ಬಣ್ಣ ಬದಲಾಯಿಸಿದ್ದಾರೆ.
ಇನ್ನು ದಿನ ಕಳೆದಂತೆ ಇನ್ಯಾವ ಬಣ್ಣ ಬದಲಾಯಿಸ್ತಾರೋ ನೋಡಬೇಕು. ಮೊದಲು ಎಲ್ಲ ಪದವೀಧರ ನಿರುದ್ಯೋಗಿಗಳಿಗೂ 3 ಸಾವಿರ ರೂ. ಕೊಡ್ತೀವಿ ಅಂದಿದ್ರು. ಈಗ 2022-23ರ ಸಾಲಿನ ಪದವೀಧರರಿಗೆ ಮಾತ್ರ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ಪಾಸ್ ಕೊಡಲೇಬೇಕು. ಗೃಹಿಣಿಯರಿಗೆ 2 ಸಾವಿರ ರೂ. ಕೊಡಲೇಬೇಕು. ಉಚಿತ ವಿದ್ಯುತ್ ಕೊಡಲೇಬೇಕು. ಹೇಳಿದ್ಮೇಲೆ ಎಲ್ಲ ಗ್ಯಾರಂಟಿನೂ ಕೊಡಲೇಬೇಕು ಎಂದು ಒತ್ತಾಯಿಸಿದರಲ್ಲದೇ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬಾರದು, ಬಿಲ್ ಬಂದ್ರೆ ಮುಖ್ಯಮಂತ್ರಿಯವರು ಹೇಳಿದ್ದಾರೆ ಅಂತಾ ಅವರಿಗೆ ಕಳುಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಅವಧಿಯ ಹಗರಣಗಳನ್ನು ತನಿಖೆಗೆ ಒಪ್ಪಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಸಮಯದ ಗಡುವಿನೊಳಗೆ ತನಿಖೆ ಮಾಡಲಿ. ಅಂತಹ ಹಗರಣ ನಡೆದಿದ್ದರೆ ಮೂರು ತಿಂಗಳಲ್ಲಿ ತನಿಖೆ ಮಾಡಿಸಲಿ. ಆಗ ಸತ್ಯ ಗೊತ್ತಾಗುತ್ತೆ. ಬಿಜೆಪಿ ಅವಧಿಯ ತನಿಖೆಗಳಷ್ಟೇ ಅಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.