ಡಿ.ಕೆ.ಶಿವಕುಮಾರ್ ಸರ್ವಾಧಿಕಾರಿ ವರ್ತನೆ ತಳೆದಿದ್ದಾರೆ: ಅಶ್ವಥ ನಾರಾಯಣ್
ಬೆಂಗಳೂರು: ಚಿತ್ರದುರ್ಗದ ಶಿಕ್ಷಕ ಶಾಂತಮೂರ್ತಿ ಎನ್ನುವವರನ್ನು ಅಮಾನತು ಮಾಡಿಸಿ ಡಿಕೆಶಿ ಸರ್ವಾಧಿಕಾರಿ ವರ್ತನೆ ತಳೆದಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಲೆಯ ಶಿಕ್ಷಕ ಶಾಂತಮೂರ್ತಿ ಫೇಸ್ಬುಕ್ ಖಾತೆಯಲ್ಲಿ ಯಾವ ಯಾವ ಮುಖ್ಯಮಂತ್ರಿ ಅವರವರ ಕಾಲದಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದರು ಎಂದು ಹಾಕಿಕೊಂಡಿದ್ದರು.
ಜೆ.ಹೆಚ್. ಪಟೇಲ್ ಕಾಲದಿಂದ ಇಲ್ಲಿಯವರೆಗೆ ಎಷ್ಟು ಸಾಲ ಮಾಡಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದರು. ಅದಕ್ಕೆ ಶಿಕ್ಷಕ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರು ಸಹ ಸರ್ಕಾರವನ್ನು ಟೀಕೆ ಮಾಡುವ ಹಾಗಿಲ್ಲ, ವಾಕ್ ಸ್ವಾಂತಂತ್ರ್ಯ ಇಲ್ಲ ಎಂಬುದಕ್ಕೆ ಇಂದೊಂದು ನಿದರ್ಶನ.
ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಸಹ ಇದೇ ರೀತಿ ದೌಜರ್ನ್ಯ, ದಬ್ಬಾಳಿಕೆ ಮಾಡುತ್ತಿದ್ದರು. ಇವರು ಅದೇ ರೀತಿ ವರ್ತನೆ ಮಾಡುತ್ತಿದ್ದಾರೆ, ನಾವು ಖಂಡಿಸುತ್ತೇವೆ ಎಂದು ಹೇಳಿದರು. ಗ್ಯಾರಂಟಿಗಳಿಗೆ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಆದರೆ ತಿಂಗಳ ಸಮಯ ಬೇಕಾದರೆ ಪಡೆಯಬೇಕಿತ್ತು, ಯಾಕೆ ರಾಹುಲ್ ಬಾಯಲ್ಲಿ ಮೊದಲ ಸಂಪುಟದಲ್ಲೇ ಜಾರಿ ಮಾಡುವುದಾಗಿ ಹೇಳಿಸಿದ್ದಿರಿ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಅಶ್ವಥನಾರಾಯಣ್ ಪ್ರಶ್ನಿಸಿದರು.